31 - Luqman ()

|

(1) ಅಲೀಫ್ ಲಾಮ್ ಮೀಮ್.

(2) ಇವು ಯುಕ್ತಿಪೂರ್ಣ ಗ್ರಂಥದ ಸೂಕ್ತಿಗಳಾಗಿವೆ.

(3) ಒಳಿತಿನ ಪಾಲಕರಿಗೆ ಇದು ಸನ್ಮಾರ್ಗವೂ, ಕಾರುಣ್ಯವೂ ಆಗಿದೆ.

(4) ಅವರೇ ನಮಾಝ್ ಸಂಸ್ಥಾಪಿಸುವವರೂ, ಝಕಾತ್ ನೀಡುವವರೂ ಮತ್ತು ಪರಲೋಕದಲ್ಲಿ ದೃಢನಂಬಿಕೆಯುಳ್ಳವರೂ ಆಗಿದ್ದಾರೆ.

(5) ಅವರು ತಮ್ಮ ಪ್ರಭುವಿನವತಿಯ ಸನ್ಮಾರ್ಗದಲ್ಲಿರುವವರು ಮತ್ತು ಅವರೇ ಯಶಸ್ಸು ಪಡೆಯುವವರಾಗಿದ್ದಾರೆ.

(6) ಮತ್ತು ಕೆಲವು ಜನರು ಅಲ್ಲಾಹನಿಂದ ಅಲಕ್ಷö್ಯಗೊಳಿಸುವ ವಸ್ತುಗಳನ್ನು ಖರೀದಿಸುತ್ತಾರೆ. ಜನರನ್ನು ಅಜ್ಞಾನದೊಂದಿಗೆ ಅಲ್ಲಾಹನ ಮಾರ್ಗದಿಂದ ತಡೆಯಲಿಕ್ಕಾಗಿ, ಅದನ್ನು (ಧರ್ಮವನ್ನು) ಪರಿಹಾಸ್ಯವನ್ನಾಗಿ ಮಾಡಿಕೊಳ್ಳಲಿಕ್ಕಾಗಿ, ಅವರಿಗೆ ಅಪಮಾನಕರ ಶಿಕ್ಷೆಯಿರುವುದು.

(7) ಅವನ ಮುಂದೆ ನಮ್ಮ ಸೂಕ್ತಿಗಳನ್ನು ಪಠಿಸಲಾದರೆ ಅವನು ಅಹಂಕಾರ ತೋರುತ್ತಾ ಕೇಳಲೇ ಇಲ್ಲವೆಂಬAತೆ ಅಥವಾ ಅವನ ಕಿವಿಗಳೆರಡರಲ್ಲು ಕಿವುಡು ಇರುವಂತೆ ವಿಮುಖನಾಗಿಬಿಡುತ್ತಾನೆ. ನೀವು ಅವನಿಗೆ ವೇದನಾಜನಕ ಯಾತನೆಯ ಸುವಾರ್ತೆಯನ್ನೀಡಿರಿ.

(8) ನಿಸ್ಸಂಶಯವಾಗಿಯು ಯಾರು ಸತ್ಯವಿಶ್ವಾಸವಿರಿಸಿ, ಸತ್ಕರ್ಮಗಳನ್ನು ಕೈಗೊಂಡರೋ ಅವರಿಗೆ ಅನುಗ್ರಹ ಪೂರ್ಣ ಸ್ವರ್ಗೋದ್ಯಾನಗಳಿವೆ.

(9) ಅವರು ಅಲ್ಲಿ ಶಾಶ್ವತರಾಗಿರುವರು. ಇದು ಅಲ್ಲಾಹನ ಸತ್ಯ ವಾಗ್ದಾನವಾಗಿದೆ. ಅವನು ಮಹಾ ಪ್ರಚಂಡನು, ಯುಕ್ತಿಪೂರ್ಣನು ಆಗಿದ್ದಾನೆ.

(10) ಅವನೇ ನೀವು ನೋಡುವಂತಹ ಯಾವುದೇ ಸ್ಥಂಭಗಳಿಲ್ಲದೆ ಆಕಾಶಗಳನ್ನು ಸೃಷ್ಟಿಸಿದನು ಮತ್ತು ಅವನು ಭೂಮಿಯಲ್ಲಿ ಸದೃಢ ಪರ್ವತಗಳನ್ನು ಅವು ನಿಮ್ಮನ್ನು ವಾಲಿಸದಿರಲೆಂದು ನಾಟಿಬಿಟ್ಟನು ಮತ್ತು ಎಲ್ಲಾ ವಿಧದ ಜೀವಿಗಳನ್ನು ಭೂಮಿಯಲ್ಲಿ ಹಬ್ಬಿಸಿಬಿಟ್ಟನು ಮತ್ತು ಆಕಾಶದಿಂದ ನೀರನ್ನು ಸುರಿಸಿ ನಾವು ಭೂಮಿಯಲ್ಲಿ ಎಲ್ಲಾ ರೀತಿಯ ಉತ್ತಮ ಜೋಡಿಗಳನ್ನು ಬೆಳೆಸಿದೆವು.

(11) ಇದು ಅಲ್ಲಾಹನ ಸೃಷ್ಟಿಯಾಗಿದೆ. ಇನ್ನು ಅವನ ಹೊರತು ಮಿಥ್ಯ ದೇವರುಗಳು ಏನನ್ನು ಸೃಷ್ಟಿಸಿದ್ದಾರೆಂದು ನೀವು ನನಗೆ ತೋರಿಸಿರಿ. ವಸ್ತುತಃ ಅಕ್ರಮಿಗಳು ಸ್ಪಷ್ಟ ಪಥಭ್ರಷ್ಟತೆಯಲ್ಲಿದ್ದಾರೆ.

(12) ಮತ್ತು ನಿಶ್ಚಯವಾಗಿಯು ನಾವು ಲುಕ್ಮಾನರಿಗೆ ಸುಜ್ಞಾನವನ್ನು ದಯಪಾಲಿಸಿದೆವು. ನೀವು ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸಿರಿ ಎಂದು ಯಾರು ಕೃತಜ್ಞತೆ ಸಲ್ಲಿಸುವನೋ ಅವನು ತನ್ನದೇ ಒಳಿತಿಗಾಗಿ ಕೃತಜ್ಞತೆ ಸಲ್ಲಿಸುತ್ತಾನೆ ಮತ್ತು ಯಾರು ಕೃತಘ್ನತೆ ತೋರಿದನೋ ನಿಶ್ಚಯವಾಗಿ ಅಲ್ಲಾಹನು ನಿರಪೇಕ್ಷನು, ಸ್ತುತ್ಯರ್ಹನು ಆಗಿದ್ದಾನೆ.

(13) ಮತ್ತು ಲುಕ್ಮಾನರು ತಮ್ಮ ಮಗನಿಗೆ ಉಪದೇಶ ನೀಡುತ್ತಾ ಹೇಳಿದ ಸಂದರ್ಭವನ್ನು ಸ್ಮರಿಸಿರಿ: ಓ ನನ್ನ ಪ್ರಿಯ ಮಗನೇ, ನೀನು ಅಲ್ಲಾಹನೊಂದಿಗೆ ಸಹಭಾಗಿತ್ವ ಕಲ್ಪಿಸದಿರು. ನಿಸ್ಸಂದೇಹವಾಗಿಯು ಸಹಭಾಗಿತ್ವ ಕಲ್ಪಿಸುವುದು ಘೋರ ಅಕ್ರಮವಾಗಿದೆ.

(14) ನಾವು ಮಾನವನಿಗೆ ಅವನ ಮಾತಾಪಿತರ ಕುರಿತು ಸದ್ವರ್ತನೆಯ ಉಪದೇಶ ನೀಡಿದ್ದೇವೆ. ಅವನ ತಾಯಿಯು ಬಲಹೀನತೆಯ ಮೇಲೆ ಬಲಹೀನತೆಯನ್ನು ಸಹಿಸಿ ಅವನನ್ನು ಗರ್ಭದಲ್ಲಿರಿಸಿದಳು ಮತ್ತು ಅವನ ಸ್ತನಪಾನ ಬಿಡಿಸುವಿಕೆಯು ಎರಡು ವರ್ಷಗಳಲ್ಲಾಗಿದೆ. ನೀನು ನನಗೂ, ನಿನ್ನ ಮಾತಾಪಿತರಿಗೂ ಕೃತಜ್ಞತೆ ಸಲ್ಲಿಸು. (ನಿಮಗೆಲ್ಲರಿಗೂ) ನನ್ನೆಡೆಗೇ ಮರಳಲಿಕ್ಕಿರುವುದು.

(15) ಮತ್ತು ನಿನಗೆ ಯಾವುದೇ ಜ್ಞಾನವಿಲ್ಲದೆ ಏನನ್ನಾದರೂ ನನ್ನೊಂದಿಗೆ ಸಹಭಾಗಿಯನ್ನಾಗಿ ನಿಶ್ಚಯಿಸಬೇಕೆಂದು ಅವರಿಬ್ಬರು (ತಂದೆತಾಯAದಿರು) ನಿನ್ನ ಮೇಲೆ ಬಲವಂತ ಮಾಡಿದರೆ ನೀನು ಅವರನ್ನು ಅನುಸರಿಸಬೇಡ. ಆದರೆ ಇಹಲೋಕದಲ್ಲಿ ಅವರಿಬ್ಬರೊಂದಿಗೆ ಸೌಜನ್ಯದೊಂದಿಗೆ ವರ್ತಿಸು ಮತ್ತು ನನ್ನೆಡೆಗೆ ವಿಧೇಯನಾದವನ ಮಾರ್ಗವನ್ನು ಅನುಸರಿಸು. ನಿಮ್ಮೆಲ್ಲರ ಮರಳುವಿಕೆಯು ನನ್ನೆಡೆಗೇ ಆಗಿದೆ. ಅನಂತರ ನಾನು ನೀವು ಮಾಡುತ್ತಿರುವುದನ್ನು ನಿಮಗೆ ತಿಳಿಸಿಕೊಡುವೆನು.

(16) ಓ ನನ್ನ ಪ್ರಿಯಮಗನೇ, ಖಂಡಿತವಾಗಿಯು ಅದು (ಕರ್ಮ) ಒಂದು ಸಾಸಿವೆ ಕಾಳಿನಷ್ಟಿದ್ದೂ, ಅನಂತರ ಅದು ಬಂಡೆಗಲ್ಲಿನಲ್ಲಿದ್ದರೂ, ಅಥವಾ ಆಕಾಶಗಳಲ್ಲಿದ್ದರೂ ಅಥವಾ ಭೂಮಿಯಲ್ಲಿದ್ದರೂ (ಎಲ್ಲೇಅಡಗಿದ್ದರೂ) ಅದನ್ನು ಅಲ್ಲಾಹನು ತರುವನು. ನಿಸ್ಸಂಶಯವಾಗಿಯು ಅಲ್ಲಾಹನು ಸೂಕ್ಷö್ಮನೂ, ಪರಿಪೂರ್ಣ ಅರಿವುಳ್ಳವನೂ ಆಗಿದ್ದಾನೆ.

(17) ಓ ನನ್ನ ಪ್ರಿಯ ಮಗನೇ, ನಮಾಝ್ ಸಂಸ್ಥಾಪಿಸು ಮತ್ತು ಒಳಿತಿನ ಆದೇಶ ನೀಡುತ್ತಿರು. ದುಷ್ಕೃತ್ಯಗಳಿಂದ ತಡೆಯುತ್ತಿರು ಮತ್ತು ನಿನಗೆ ಏನೇ ಆಪತ್ತು ಸಂಭವಿಸಿದರೂ ಅದರ ಮೇಲೆ ಸಹನೆವಹಿಸು, ನಿಸ್ಸಂಶಯವಾಗಿ ಇದು ದೃಢ, ಸಾಹಸದ ಕೆಲಸವಾಗಿದೆ.

(18) ದರ್ಪದಿಂದ ನೀನು ಜನರಿಂದ ನಿನ್ನ ಮುಖವನ್ನುತಿರುಗಿಸದಿರು ಮತ್ತು ಭೂಮಿಯಲ್ಲಿ ಅಹಂಕಾರದಿAದ ನಡೆಯದಿರು. ನಿಜವಾಗಿಯು ಅಹಂಕಾರಿಯಾದ ದುರಭಿಮಾನಿಯನ್ನು ಅಲ್ಲಾಹನು ಮೆಚ್ಚುವುದಿಲ್ಲ.

(19) ನಿನ್ನ ನಡೆಯಲ್ಲಿ ಮಿತಿಯನ್ನು ಪಾಲಿಸು ಮತ್ತು ನಿನ್ನ ಸ್ವರವನ್ನು ತಗ್ಗಿಸು. ನಿಜವಾಗಿಯೂ ಸ್ವರಗಳಲ್ಲಿ ಅತ್ಯಂತಕೆಟ್ಟ ಸ್ವರವು ಕತ್ತೆಯ ಸ್ವರವಾಗಿದೆ.

(20) ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಸಕಲ ವಸ್ತುಗಳನ್ನು ಅಲ್ಲಾಹನು ನಿಮಗೆ ಅಧೀನಗೊಳಿಸಿರುವುದನ್ನು ನೀವು ನೋಡುತ್ತಿಲ್ಲವೇ? ಮತ್ತು ಅವನು ನಿಮಗೆ ತನ್ನ ಗೋಚರ ಹಾಗೂ ಅಗೋಚರವಾದ ತನ್ನ ಅನುಗ್ರಹಗಳನ್ನು ಸಂಪೂರ್ಣವಾಗಿ ನೀಡಿರುತ್ತಾನೆ. ಆದರೆ ಕೆಲವು ಜನರು ಅಲ್ಲಾಹನ ವಿಚಾರದಲ್ಲಿ ಯಾವುದೇ ಜ್ಞಾನ, ಮಾರ್ಗದರ್ಶನ ಮತ್ತು ಪ್ರಕಾಶಮಯ ಗ್ರಂಥವಿಲ್ಲದೆಯೇ ಜಗಳವಾಡುತ್ತಾರೆ.

(21) ಮತ್ತು ಅವರೊಂದಿಗೆ “ಅಲ್ಲಾಹನು ಅವತೀರ್ಣಗೊಳಿಸಿರುವುದನ್ನು ಅನುಸರಿಸಿರಿ” ಎಂದು ಹೇಳಲಾದರೆ ಅವರು ಹೇಳುತ್ತಾರೆ: ಇಲ್ಲ, ನಮ್ಮ ಪೂರ್ವಿಕರನ್ನು ಯಾವ ಮಾರ್ಗದಲ್ಲಿದ್ದುದಾಗಿ ಕಂಡಿದ್ದೇವೆಯೋ ಅದನ್ನೇ ನಾವು ಅನುಸರಿಸುತ್ತೇವೆ ಶೈತಾನನು ಅವರನ್ನು (ಅವರ ಪೂರ್ವಿಕರನ್ನು) ನರಕದ ಯಾತನೆಯೆಡೆಗೆ ಕರೆಯುತ್ತಿದ್ದರೂ ಸರಿಯೇ?

(22) ಯಾರು ತನ್ನನ್ನು ಅಲ್ಲಾಹನಿಗೆ ಅರ್ಪಿಸಿಕೊಂಡು ಸತ್ಕರ್ಮಿಯೂ ಆದವನು ನಿಶ್ಚಯವಾಗಿಯೂ ಅವನು ಅತ್ಯಂತ ಸದೃಢ ಪಾಶವನ್ನು (ಇಸ್ಲಾಮನ್ನು) ಹಿಡಿದುಕೊಂಡನು. ಸರ್ವ ಕಾರ್ಯಗಳ ಅಂತಿಮ ಪರಿಣಾಮವು ಅಲ್ಲಾಹನೆಡೆಗೇ ಆಗಿದೆ.

(23) (ಓ ಪೈಗಂಬರರೇ) ಸತ್ಯನಿಷೇಧಿಗಳ ಸತ್ಯನಿಷೇಧವು ನಿಮಗೆ ದುಃಖಕ್ಕೀಡು ಮಾಡದಿರಲಿ, ಕೊನೆಗೆ ಅವರೆಲ್ಲರ ಮರಳುವಿಕೆಯು ನಮ್ಮೆಡೆಗೇ ಆಗಿದೆ. ಅನಂತರ ನಾವು ಅವರಿಗೆ ಅವರು ಮಾಡುತ್ತಿದ್ದುದೆಲ್ಲವನ್ನು ತಿಳಿಸಿಕೊಡುವೆವು. ನಿಸ್ಸಂದೇಹವಾಗಿಯು ಅಲ್ಲಾಹನು ಹೃದಯಗಳಲ್ಲಿರುವ ರಹಸ್ಯಗಳನ್ನು ಅರಿಯುತ್ತಾನೆ.

(24) ನಾವು ಅವರಿಗೆ ಅಲ್ಪಕಾಲ ಭೂಲೋಕದಲ್ಲಿ ಸುಖಭೋಗಗಳನ್ನು ನೀಡುವೆವು. ಕೊನೆಗೆ ಅವರನ್ನು ಕಠಿಣಯಾತನೆಯೆಡೆಗೆ ಬಲವಂತವಾಗಿ ಎಳೆದೊಯ್ಯುವೆವು.

(25) ಆಕಾಶಗಳನ್ನೂ, ಭೂಮಿಯನ್ನೂ ಸೃಷ್ಟಿಸಿದವನು ಯಾರೆಂದು ನೀವು ಅವರೊಂದಿಗೆ ಕೇಳಿದರೆ ಖಂಡಿತ ಅವರು ಅಲ್ಲಾಹನೆಂದು ಉತ್ತರಿಸುವರು. ಹೇಳಿರಿ: ಅಲ್ಲಾಹನಿಗೇ ಸರ್ವಸ್ತುತಿ. ಆದರೆ ಅವರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.

(26) ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅಲ್ಲಾಹನದ್ದಾಗಿದೆ. ನಿಶ್ಚಯವಾಗಿಯು ಅಲ್ಲಾಹನು ನಿರಪೇಕ್ಷನೂ, ಸ್ತುತ್ಯರ್ಹನೂ ಆಗಿದ್ದಾನೆ.

(27) ಭೂಮಿಯಲ್ಲಿರುವ ಮರಗಳೆಲ್ಲವೂ ಲೇಖನಿಗಳಾದರೆ, ಸಮುದ್ರವೂ ಶಾಯಿಯಾದರೆ ಮತ್ತು ಅದರ ನಂತರ ಇನ್ನೂ ಏಳು ಸಮುದ್ರಗಳು ಇದ್ದರೂ ಅಲ್ಲಾಹನ ಮಾತುಗಳು ಮುಗಿಯಲಾರವು. ನಿಸ್ಸಂಶಯವಾಗಿಯು ಅಲ್ಲಾಹನು ಪ್ರಚಂಡನು, ಸುಜ್ಞಾನಿಯು ಆಗಿದ್ದಾನೆ.

(28) ನಿಮ್ಮನ್ನು ಸೃಷ್ಟಿಸುವುದು ಮತ್ತು ಪುನಃ ಜೀವಂತಗೊಳಿಸುವುದು ಒಬ್ಬ ವ್ಯಕ್ತಿಯನ್ನು ಸೃಷ್ಟಿಸಿದಂತೆಯೇ ಆಗಿದೆ. ನಿಸ್ಸಂಶಯವಾಗಿಯು ಅಲ್ಲಾಹನು ಸರ್ವವನ್ನಾಲಿಸುವವನು, ಸರ್ವವನ್ನು ವೀಕ್ಷಿಸುವವನು ಆಗಿರುವನು.

(29) ಅಲ್ಲಾಹನು ರಾತ್ರಿಯನ್ನು ಹಗಲಿನೊಳಗೆ ಮತ್ತು ಹಗಲನ್ನು ರಾತ್ರಿಯೊಳಗೆ ಪ್ರವೇಶಿಸುತ್ತಾನೆ ಎಂಬುದನ್ನು ನೀವು ನೋಡುವುದಿಲ್ಲವೇ? ಸೂರ್ಯ ಮತ್ತು ಚಂದ್ರರನ್ನು ಅವನೇ ವಿಧೇಯಗೊಳಿಸಿರುತ್ತಾನೆ. ಪ್ರತಿಯೊಂದು ಸಹ ಒಂದು ನಿಶ್ಚಿತ ಕಾಲಾವಧಿಯವರೆಗೆ ಚಲಿಸುತ್ತಿವೆ. ನೀವು ಮಾಡುತ್ತಿರುವ ಸಕಲ ಕಾರ್ಯಗಳ ಕುರಿತು ಅಲ್ಲಾಹನು ಅರಿವುಳ್ಳವನಾಗಿರುತ್ತಾನೆ.

(30) ಇದೇಕೆಂದರೆ ನಿಶ್ಚಯವಾಗಿಯು ಅಲ್ಲಾಹನೇ ಸತ್ಯವಾಗಿರುವನು. ಅವನ ಹೊರತು ಅವರು ಕರೆದು ಬೇಡುತ್ತಿರುವವರೆಲ್ಲರೂ ಮಿಥ್ಯರಾಗಿರುವರು. ಮತ್ತು ನಿಶ್ಚಯವಾಗಿಯು ಅಲ್ಲಾಹನೇ ಮಹೋನ್ನತನು ಹಾಗೂ ಮಹಾನನಾಗಿರುತ್ತಾನೆ.

(31) ಸಮುದ್ರದಲ್ಲಿ ಹಡಗುಗಳು ಅಲ್ಲಾಹನ ಕೃಪೆಯಿಂದ ಸಂಚರಿಸುತ್ತಿರುವುದನ್ನು ನೀವು ನೋಡಿಲ್ಲವೇ? ಇದು ಅವನ ನಿದರ್ಶನಗಳನ್ನು ನಿಮಗೆ ತೋರಿಸಿ ಕೊಡಲೆಂದಾಗಿದೆ. ನಿಜವಾಗಿಯು ಇದರಲ್ಲಿ ಪ್ರತಿಯೊಬ್ಬ ಸಹನಾಶೀಲನಿಗೂ, ಕೃತಜ್ಞನಿಗೂ ಹಲವಾರು ನಿದರ್ಶನಗಳಿವೆ.

(32) ಮತ್ತು ಚಪ್ಪರಗಳಂತೆ ಇರುವ ಅಲೆಯು ಅವರನ್ನು ಆವರಿಸಿದಾಗ ಅವರು ಅಲ್ಲಾಹನಿಗಾಗಿ ಧರ್ಮವನ್ನು ಮೀಸಲಿಟ್ಟು ನಿಷ್ಠೆಯೊಂದಿಗೆ ಅವನನ್ನೇ ಕರೆದು ಬೇಡುತ್ತಾರೆ. ಆದರೆ ಅವನು ಅವರನ್ನು ದಡಕ್ಕೆ ತಲುಪಿಸಿದಾಗ ಅವರಲ್ಲಿ ಕೆಲವರು ಮಧ್ಯಮ ನಿಲುವಿನಲ್ಲಿ ನಿಲ್ಲುತ್ತಾರೆ ಮತ್ತು ನಮ್ಮ ದೃಷ್ಟಾಂತಗಳನ್ನು ವಿಶ್ವಾಸಘಾತಕ ಹಾಗೂ ಕೃತಘ್ನನಾಗಿರುವನೇ ತಿರಸ್ಕರಿಸುತ್ತಾನೆ.

(33) ಓ ಜನರೇ, ನೀವು ನಿಮ್ಮ ಪ್ರಭುವನ್ನು ಭಯಪಡಿರಿ ಮತ್ತು ಯಾವ ತಂದೆಯು ತನ್ನ ಮಗನಿಗೆ ಪ್ರಯೋಜನಕ್ಕೆ ಬಾರದ ಮತ್ತು ಯಾವ ಮಗನು ತನ್ನ ತಂದೆಗೆ ಒಂದಿಷ್ಟೂ ಪ್ರಯೋಜನಕಾರಿಯಾಗದ ದಿನವೊಂದನ್ನು ನೀವು ಭಯಪಟ್ಟುಕೊಳ್ಳಿರಿ. ಅಲ್ಲಾಹನ ವಾಗ್ದಾನವು ಸತ್ಯವಾಗಿದೆ. ನಿಮ್ಮನ್ನು ಈ ಇಹಲೋಕ ಜೀವನವು ವಂಚಿಸದಿರಲಿ ಮತ್ತು ಮಹಾವಂಚಕ(ಶೈತಾನ)ನು ನಿಮ್ಮನ್ನು ಅಲ್ಲಾಹನ ಬಗ್ಗೆ ವಂಚಿಸದಿರಲಿ.

(34) ನಿಸ್ಸಂಶಯವಾಗಿಯು ಅಲ್ಲಾಹನ ಬಳಿಯೇ ಪ್ರಳಯದ ಜ್ಞಾನವಿದೆ. ಅವನೇ ಮಳೆಯನ್ನು ಸುರಿಸುತ್ತಾನೆ ಮತ್ತು ಅವನು ಗರ್ಭಾಶಯಗಳಲ್ಲಿರುವುದನ್ನು ಅರಿಯುತ್ತಾನೆ ಮತ್ತು ಯಾವ ವ್ಯಕ್ತಿಯು ತಾನು ನಾಳೆಯ ದಿನ ಏನು ಮಾಡುತ್ತೇನೆಂಬುದನ್ನು ಅರಿಯುವುದಿಲ್ಲ ಮತ್ತು ತಾನು ಯಾವ ಭೂಪ್ರದೇಶದಲ್ಲಿ ಸಾಯುವೆನೆಂದು ಅರಿಯುವುದಿಲ್ಲ. ನಿಸ್ಸಂದೇಹವಾಗಿಯು ಅಲ್ಲಾಹನು ಸರ್ವಜ್ಞಾನಿಯೂ, ಚೆನ್ನಾಗಿ ಅರಿಯುವವನೂ ಆಗಿದ್ದಾನೆ.