53 - An-Najm ()

|

(1) ನಕ್ಷತ್ರದಾಣೆ, ಅದು ಅಸ್ತಮಿಸಿದಾಗ.

(2) ನಿಮ್ಮ ಸಂಗಡಿಗ (ಮುಹಮ್ಮದ್) ದಾರಿತಪ್ಪಿಲ್ಲ, ಮತ್ತು ಮಾರ್ಗ ಭ್ರಷ್ಟನೂ ಅಲ್ಲ.

(3) ಆತ ತನ್ನ ಸ್ವೇಚ್ಛೆಯಿಂದ ಮಾತನಾಡುವುದಿಲ್ಲ.

(4) ಅದು ಅವರಿಗೆ ಸಂದೇಶ ನೀಡಲಾದ ದಿವ್ಯವಾಣಿ ಆಗಿರುತ್ತದೆ.

(5) ಮಹಾಶಕ್ತಿಶಾಲಿಯಾದ ದೇವದೂತ ಜಿಬ್ರೀಲನು ಅವರಿಗೆ ಕಲಿಸಿರುತ್ತಾನೆ.

(6) ಅವನು ಬಲಿಷ್ಠನಾಗಿರುವನು, ಅನಂತರ ಅವನು ಪ್ರತ್ಯಕ್ಷನಾದನು.

(7) ಅವನು ಉನ್ನತ ದಿಗಂತದ ತುದಿಯಲ್ಲಿದ್ದನು.

(8) ತರುವಾಯ ಅವನು ಹತ್ತಿರವಾದನು, ಬಳಿಕ ಇನ್ನೂ ನಿಕಟನಾದನು.

(9) ಎರಡು ಬಿಲ್ಲುಗಳಷ್ಟು ಅಥವ ಅದಕ್ಕಿಂತಲೂ ಸಮೀಪ.

(10) ಆಗ ಅವನು ಅಲ್ಲಾಹನ ದಾಸನೆಡೆಗೆ ತಲುಪಿಸಬೇಕಾದುದನ್ನು ದಿವ್ಯವಾಣಿಯನ್ನು ತಲುಪಿಸಿದನು.

(11) ಪೈಗಂಬರರು ನೋಡಿದ್ದನ್ನು ಅವರ ಮನಸ್ಸು ಸುಳ್ಳಾಗಿಸಲಿಲ್ಲ.

(12) ಇನ್ನು ಅವರು ಕಣ್ಣಾರೆ ಕಂಡಿರುವುದರ ಬಗ್ಗೆ ನೀವು ತರ್ಕ ಮಾಡುತ್ತಿರುವಿರಾ ?

(13) ಪೈಗಂಬರರು ಅವರನ್ನು (ಜಿಬ್ರೀಲರನ್ನು) ಮತ್ತೊಂದು ಸಲ ಕಂಡಿದ್ದರು.

(14) 'ಸಿದ್‌ರತುಲ್ ಮುಂತಹಾ'ದ ಬಳಿ.

(15) ಅದರ ಸಮೀಪದಲ್ಲಿ 'ಜನ್ನತುಲ್ ಮಾವಾ' ಇದೆ.

(16) ಆಗ 'ಸಿದ್ರ್ ವೃಕ್ಷ'(ಬಾರೆ ವೃಕ್ಷ)ವನ್ನು ಆಚ್ಛಾದಿಸ ಬೇಕಾದದ್ದು ಆಚ್ಛಾದಿಸುತ್ತಿತ್ತು.

(17) ಪೈಗಂಬರರ ದೃಷ್ಟಿಯು ತಪ್ಪಲಿಲ್ಲ ಮತ್ತು ಮೇರೆಮೀರಲೂ ಇಲ್ಲ.

(18) ನಿಜವಾಗಿಯೂ ಅವರು ತಮ್ಮ ಪ್ರಭುವಿನ ಮಹಾ ನಿದರ್ಶನಗಳಲ್ಲಿ ಕೆಲವನ್ನು ಕಂಡರು.

(19) ನೀವು ಲಾತ್ ಉಝ್ಝಾಗಳ ಬಗ್ಗೆ ಯೋಚಿಸಿದ್ದೀರಾ ?

(20) ಮೂರನೆಯದಾದ 'ಮನಾತ'ನ ಬಗ್ಗೆ ?

(21) ಏನು ನಿಮಗೆ ಪುತ್ರರು ಮತ್ತು ಅಲ್ಲಾಹನಿಗೆ ಪುತ್ರಿಯರೇ ?

(22) ಹಾಗಿದ್ದರೆ ಇದಂತು ಘೋರ ಅನ್ಯಾಯದ ಹಂಚುವಿಕೆಯಾಗಿದೆ.

(23) ವಾಸ್ತವದಲ್ಲಿ ಇವು (ವಿಗ್ರಹಗಳು) ನೀವೂ, ನಿಮ್ಮ ಪೂರ್ವಿಕರು ಇಟ್ಟಿರುವ ಕೆಲವು ನಾಮಗಳ ಹೊರತು ಬೇರೇನೂ ಅಲ್ಲ. ಇವುಗಳ ಬಗ್ಗೆ ಅಲ್ಲಾಹನು ಯಾವ ಆಧಾರವನ್ನು ಇಳಿಸಿಲ್ಲ. ಅವರು ಕೇವಲ ಊಹೆಯನ್ನು ಹಾಗು ತಮ್ಮ ಸ್ವೇಚ್ಛೆಯನ್ನು ಅನುಸರಿಸುತ್ತಿದ್ದಾರೆ ಮತ್ತು ನಿಜವಾಗಿಯೂ ಅವರ ಬಳಿ ಅವರ ಪ್ರಭುವಿನ ಕಡೆಯಿಂದ ಸನ್ಮಾರ್ಗವೂ ಬಂದಿರುತ್ತದೆ.

(24) ಏನು ಮನುಷ್ಯನಿಗೆ ಅವನು ಬಯಸುವುದೆಲ್ಲವೂ ಲಭಿಸುವುದೇ ?

(25) ಆದರೆ ಇಹಲೋಕ ಮತ್ತು ಪರಲೋಕ ಅಲ್ಲಾಹನದ್ದಾಗಿದೆ.

(26) ಆಕಾಶಗಳಲ್ಲಿ ಅದೆಷ್ಟೋ ದೇವಚರರಿದ್ದಾರೆ. ಅವರ ಶಿಫಾರಸ್ಸು (ಯಾರಿಗೂ) ಯಾವ ಪ್ರಯೋಜನಕ್ಕೂ ಬಾರದು. ಆದರೆ ಅಲ್ಲಾಹನು ತನ್ನ ಸಂತೃಪ್ತಿಯಿAದ ತಾನು ಇಚ್ಛಿಸುವವರಿಗೆ ಅನುಮತಿ ನೀಡಿದರೆ ಬೇರೆ ವಿಚಾರ.

(27) ನಿಸ್ಸಂಶವಾಗಿಯೂ ಪರಲೋಕದಲ್ಲಿ ವಿಶ್ವಾಸವಿಡದವರು ದೇವದೂತರಿಗೆ ಸ್ತಿçÃಯರ ನಾಮವನ್ನಿಡುತ್ತಾರೆ.

(28) ವಸ್ತುತಃ ಅವರಿಗೆ ಈ ಬಗ್ಗೆ ಯಾವ ಜ್ಞಾನವೂ ಇಲ್ಲ, ಅವರು ಕೇವಲ ಊಹೆಯನ್ನು ಮಾತ್ರ ಅನುಸರಿಸುತ್ತಾರೆ. ಮತ್ತು ನಿಸ್ಸಂಶಯವಾಗಿಯೂ ಊಹೆಯು ಸತ್ಯದ ಎದುರಿಗೆ ಯಾವ ಪ್ರಯೋಜನಕ್ಕೂ ಬಾರದು.

(29) ಆದ್ದರಿಂದ ನಮ್ಮ ಸ್ಮರಣೆಯಿಂದ ವಿಮುಖನಾಗುವವನ, ಇಹಲೋಕ ಜೀವನದ ಹೊರತು ಬೇರೆನನ್ನೂ ಉದ್ದೇಶಿಸದವನನ್ನು ನೀವು ಕಡೆಗಣಿಸಿರಿ.

(30) ಅವರ ಜ್ಞಾನದ ಬಂಡವಾಳವಿಷ್ಟೇ, ನಿಮ್ಮ ಪ್ರಭು ಅವನ ಮಾರ್ಗದಿಂದ ತಪ್ಪಿದವರನ್ನು ಅರಿಯುತ್ತಾನೆ, ಹಾಗೂ ಸನ್ಮಾರ್ಗ ಪಡೆದವನನ್ನೂ ಚೆನ್ನಾಗಿ ಬಲ್ಲನು.

(31) ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅಲ್ಲಾಹನದ್ದಾಗಿದೆ. ಇದು ಅವನು ದುಷ್ಕರ್ಮವೆಸಗುವವರಿಗೆ ಅವರ ಕರ್ಮಗಳಿಗೆ ತಕ್ಕ ಪ್ರತಿಫಲ ನೀಡಲೆಂದು ಮತ್ತು ಒಳಿತನ್ನು ಮಾಡುವವರಿಗೆ ಅತ್ಯುತ್ತಮ ಪ್ರತಿಫಲ ನೀಡಲೆಂದಾಗಿದೆ.

(32) ಅಂದರೆ ಮಹಾಪಾಪಗಳಿಂದ, ಅಶ್ಲೀಲ ಕೃತ್ಯಗಳಿಂದ ದೂರವಿರುವವರು, ಆದರೆ ಸಣ್ಣ ಪಾಪಗಳ ಹೊರತು, ನಿಸ್ಸಂಶಯವಾಗಿಯೂ ನಿಮ್ಮ ಪ್ರಭುವು ವಿಶಾಲವಾದ ಕ್ಷಮೆವುಳ್ಳವನಾಗಿದ್ದಾನೆ, ಅವನು ನಿಮ್ಮನ್ನು ಭೂಮಿಯಿಂದ ಸೃಷ್ಟಿಸಿದಾಗಲೂ, ನೀವು ನಿಮ್ಮ ತಾಯಂದಿರ ಗರ್ಭಗಳಲ್ಲಿ ಭ್ರೂಣದಲ್ಲಿದ್ದಾಗಲೂ ನಿಮ್ಮನ್ನುಚೆನ್ನಾಗಿ ಬಲ್ಲನು. ಆದ್ದರಿಂದ ನೀವು ಆತ್ಮಪ್ರಶಂಸೆಯನ್ನು ಮಾಡದಿರಿ. ಖಂಡಿತವಾಗಿಯೂ ಅವನು ಭಯ ಭಕ್ತಿಯಿರಿಸಿದವರನ್ನು ಚೆನ್ನಾಗಿ ಬಲ್ಲವನಾಗಿದ್ದಾನೆ.

(33) (ಓ ಪೈಗಂಬರರೇ) ನೀವು ವಿಮುಖನಾದವನನ್ನು ನೋಡಿದಿರಾ?

(34) ಅವನು ಸ್ವಲ್ಪ ಮಾತ್ರ ಕೊಟ್ಟನು ಮತ್ತು ತಡೆ ಹಿಡಿದನು.

(35) ಅವನ ಬಳಿ ಅಗೋಚರ ಜ್ಞಾನವಿದೆಯೇ ? ಹೀಗೆ ಅವನು (ಎಲ್ಲವನ್ನು) ಕಾಣುತ್ತಿದ್ದಾನೆಯೇ?

(36) ಮೂಸಾರ ಗ್ರಂಥದಲ್ಲಿರುವುದನ್ನು ಅವನಿಗೆ ತಿಳಿಸಲಾಗಿಲ್ಲವೇ ?

(37) ಮತ್ತು ಪ್ರಾಮಾಣಿಕರಾದ ಇಬ್ರಾಹೀಮ್‌ರವರ ಗ್ರಂಥಗಳಲ್ಲಿರುವುದನ್ನು ಸಹ. (ಅವರು ದೌತ್ಯದ ಬಾದ್ಯತೆಯನ್ನು ಪೂರ್ಣಗೊಳಿಸಿದರು)

(38) ಆ ವಿಷಯ ಪಾಪ ಭಾರಹೊರುವ ಯಾವೊಬ್ಬ ವ್ಯಕ್ತಿಯೂ ಇನ್ನೊಬ್ಬ ವ್ಯಕ್ತಿಯ ಭಾರವನ್ನು ಹೊರಲಾರನು.

(39) ಮನುಷ್ಯನಿಗೆ ತಾನು ಪರಿಶ್ರಮಿಸಿದುದರ ಹೊರತು ಬೇರೇನೂ ಇಲ್ಲವೆಂದು.

(40) ಅವನ ಪರಿಶ್ರಮವನ್ನು ಸದ್ಯದಲ್ಲೇ ನೋಡಲಾಗುವುದು.

(41) ತರುವಾಯ ಅವನಿಗೆ ಸಂಪೂರ್ಣ ಪ್ರತಿಫಲವನ್ನು ನೀಡಲಾಗುವುದು.

(42) ನಿಸ್ಸಂಶಯವಾಗಿಯೂ (ಕೊನೆಗೆ) ಸಕಲರಿಗೂ ತಮ್ಮ ಪ್ರಭುವಿನೆಡೆಗೇ ತಲುಪಲಿಕ್ಕಿರುವುದು.

(43) ನಿಶ್ಚಯವಾಗಿ ಅವನೇ (ಅಲ್ಲಾಹನು) ನಗಿಸುತ್ತಾನೆ ಹಾಗು ಅವನೇ ಅಳುವಂತೆ ಮಾಡುತ್ತಾನೆ.

(44) ನಿಶ್ಚಯವಾಗಿ ಅವನೇ ಮರಣ ಕೊಡುತ್ತಾನೆ ಮತ್ತು ಜೀವ ನೀಡುತ್ತಾನೆ.

(45) ಮತ್ತು ನಿಶ್ಚಯವಾಗಿ ಅವನೇ ಗಂಡು ಹೆಣ್ಣು ಜೋಡಿಗಳನ್ನು ಸೃಷ್ಟಿಸಿರುವನು.

(46) ಒಂದು ವೀರ್ಯಾಣುವಿನಿಂದ, ಅದು (ಗರ್ಭಾಶಯದಲ್ಲಿ) ಸ್ರವಿಸಲ್ಪಟ್ಟಾಗ.

(47) ನಿಶ್ಚಯವಾಗಿಯು ಪುನಃ ಜೀವಂತಗೊಳಿಸುವುದು ಅವನ ಹೊಣೆಯಾಗಿದೆ.

(48) ಅವನೇ ಶ್ರೀಮಂತಗೊಳಿಸುತ್ತಾನೆ ಹಾಗು ಬಂಡವಾಳ ನೀಡುತ್ತಾನೆ.

(49) ಅವನೇ 'ಶಿಅರಾ'(ನಕ್ಷತ್ರದ) ಪ್ರಭುವಾಗಿರುವನು.

(50) ಮತ್ತು ಅವನೇ ಪ್ರಥಮ ಆದ್ ಜನಾಂಗವನ್ನೂ ನಾಶಪಡಿಸಿರುವನು.

(51) ಸಮೂದ್ ಜನಾಂಗವನ್ನೂ ಅವರಲ್ಲಿ ಯಾರೂ ಉಳಿಯದಂತೆ ಅಳಿಸಿದನು.

(52) ಅದಕ್ಕಿಂತ ಮೊದಲು ನೂಹರ ಜನಾಂಗವನ್ನು ಸಹ. ನಿಜವಾಗಿಯು ಅವರು ಅತ್ಯಂತ ಅಕ್ರಮಿಗಳೂ, ಮಿತಿ ಮೀರಿದವರಾಗಿದ್ದರು.

(53) ಅವನೇ ಬುಡಮೇಲಾದ (ಲೂತರ) ನಾಡನ್ನು ಕೆಡವಿಬಿಟ್ಟನು.

(54) ತರುವಾಯ ಆಚ್ಛಾದಿಸುವುದೆಲ್ಲವೂ ಅದನ್ನು ಆಚ್ಛಾದಿಸಿದವು

(55) ಆದ್ದರಿಂದ, ನೀವು ನಿಮ್ಮ ಪ್ರಭುವಿನ ಯಾವಯಾವ ಅನುಗ್ರಹಗಳ ಬಗ್ಗೆ ಸಂಶಯ ಪಡುತ್ತಿರುವಿರಿ ?

(56) ಇವರು (ಪೈಗಂಬರರು) ಗತಕಾಲದ ಮುನ್ನೆಚ್ಚರಿಕೆಗಾರರಲ್ಲಿ ಒಬ್ಬ ಮುನ್ನೆಚ್ಚರಿಕೆಗಾರರಾಗಿದ್ದಾರೆ.

(57) ಸಮೀಪವಾಗುವ ಅಂತ್ಯಗಳಿಗೆಯು ಸಮೀಪವಾಯಿತು.

(58) ಅದನ್ನು ಅಲ್ಲಾಹನ ಹೊರತು ಇನ್ನಾರೂ ಅನಾವರಣ ಗೊಳಿಸುವವರಿಲ್ಲ.

(59) ನೀವು ಈ ಕುರ್‌ಆನಿನ ಕುರಿತು ಆಶ್ಚರ್ಯ ಪಡುತ್ತಿರುವಿರಾ?

(60) ನೀವು ನಗುತ್ತಿರುವಿರಾ? ಅಳುವುದಿಲ್ಲವೇ?

(61) ನೀವು ನಿರ್ಲಕ್ಷತೋರಿಸುತ್ತಿರುವಿರಿ.

(62) ಆದ್ದರಿಂದ ನೀವು ಅಲ್ಲಾಹನಿಗೆ ಸಾಷ್ಟಾಂಗವೆರಗಿರಿ ಹಾಗೂ (ಅವನನ್ನೇ) ಆರಾಧಿಸಿರಿ.