(1) ಹಾ-ಮೀಮ್
(2) ಐನ್-ಸೀನ್-ಕಾಫ್.
(3) ಓ ಸಂದೇಶವಾಹಕರೇ ಪ್ರತಾಪಶಾಲಿಯು ಯುಕ್ತಿಪೂರ್ಣನು ಆದ ಅಲ್ಲಾಹನು ನಿಮ್ಮ ಕಡೆಗೂ ನಿಮಗಿಂತ ಮುಂಚೆ ಗತಿಸಿದ ಸಂದೇಶವಾಹಕರ ಕಡೆಗೂ ಇದೇ ರೀತಿ ದಿವ್ಯವಾಣಿ ಕಳುಹಿಸುತ್ತಿದ್ದನು.
(4) ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅವನದ್ದೇ ಆಗಿದೆ. ಅವನು ಅತ್ಯುನ್ನತನೂ, ಮಹೋನ್ನತನೂ ಆಗಿದ್ದಾನೆ.
(5) ಆಕಾಶಗಳು ಮೇಲ್ಭಾಗದಿಂದ ಸಿಡಿದು ಬೀಳುವುದರಲ್ಲಿದೆ ಮತ್ತು ಮಲಕ್ಗಳು ತಮ್ಮ ಪ್ರಭುವಿನ ಸ್ತುತಿ ಕೀರ್ತನೆಯೊಂದಿಗೆ ಅವನ ಪಾವಿತ್ರö್ಯವನ್ನು ಕೊಂಡಾಡುತ್ತಿದ್ದಾರೆ. ಮತ್ತು ಭೂವಾಸಿಗಳಿಗಾಗಿ ಅವರು ಪಾಪವಿಮೋಚನೆಯನ್ನು ಬೇಡುತ್ತಿರುತ್ತಾರೆ. ತಿಳಿಯಿರಿ! ಅಲ್ಲಾಹನೇ ಕ್ಷಮಿಸುವವನೂ ಕರುಣಾನಿಧಿಯೂ ಆಗಿದ್ದಾನೆ.
(6) ಯಾರು ಅಲ್ಲಾಹನನ್ನು ಬಿಟ್ಟು ಇತರರನ್ನು ರಕ್ಷಕ ಮಿತ್ರರನ್ನಾಗಿ ಮಾಡಿಕೊಂಡಿರುವರೋ ಅವರ ಮೇಲ್ವಿಚಾರಕನು ಅಲ್ಲಾಹನೇ ಆಗಿರುತ್ತಾನೆ. ಮತ್ತು ನೀವು ಅವರ ಹೊಣೆಗಾರರಲ್ಲ.
(7) ಇದೇ ರೀತಿ ನಾವು ನಿಮ್ಮೆಡೆಗೆ ಅರಬೀ ಭಾಷೆಯಲ್ಲಿರುವ ಕುರ್ಆನನ್ನು ಅವತೀರ್ಣಗೊಳಿಸಿದ್ದೇವೆ. ಇದು ನೀವು ಮಕ್ಕಾ ಮತ್ತು ಅದರ ಸುತ್ತಮುತ್ತಲಲ್ಲಿರು ವವರನ್ನು ಎಚ್ಚರಿಸಲೆಂದೂ, ಮತ್ತು ಸರ್ವರನ್ನು ಒಟ್ಟು ಸೇರಿಸಲಾಗುವ ದಿನದ ಬಗ್ಗೆ ಮುನ್ನೆಚ್ಚರಿಕೆ ನೀಡಲೆಂದಾಗಿದೆ. ಅಂದು ಒಂದು ತಂಡವು ಸ್ವರ್ಗಕ್ಕೆ ಹೋಗುವುದು ಮತ್ತೊಂದು ತಂಡವು ನರಕಕ್ಕೆ ಹೋಗುವುದು
(8) ಅಲ್ಲಾಹನು ಇಚ್ಛಿಸುತ್ತಿದ್ದರೆ ಅವರೆಲ್ಲರನ್ನು ಒಂದೇ ಸಮುದಾಯದವರನ್ನಾಗಿ ಮಾಡುತ್ತಿದ್ದನು. ಆದರೆ ಅವನು ತಾನಿಚ್ಛಿಸುವವರನ್ನು ತನ್ನ ಕೃಪೆಯಲ್ಲಿ ಸೇರಿಸುತ್ತಾನೆ ಮತ್ತು ಅಕ್ರಮಿಗಳಿಗೆ ರಕ್ಷಕಮಿತ್ರನಾಗಲೀ ಸಹಾಯಕನಾಗಲೀ ಯಾರೂ ಇರಲಾರನು.
(9) ವಾಸ್ತವದಲ್ಲಿ ಅವರು ಅಲ್ಲಾಹನನ್ನು ಬಿಟ್ಟು ಇತರರನ್ನು ರಕ್ಷಕರನ್ನಾಗಿ ಮಾಡಿಕೊಂಡಿದ್ದಾರೆಯೇ? ಅಲ್ಲಾಹನೇ ರಕ್ಷಕನಾಗಿದ್ದಾನೆ. ಅವನೇ ಮೃತರನ್ನು ಜೀವಂತಗೊಳಿಸುತ್ತಾನೆ ಮತ್ತು ಅವನೇ ಸಕಲ ವಸ್ತುಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
(10) ನೀವು ಯಾವ ವಿಷಯದಲ್ಲಿ ಭಿನ್ನಾಭಿಪ್ರಾಯ ಹೊಂದಿರುವಿರೋ ಅದರ ತೀರ್ಮಾನ ಅಲ್ಲಾಹನ ಕಡೆಯಿಂದಲೇ ಆಗುವುದು. ಆ ಅಲ್ಲಾಹನೇ ನನ್ನ ಪ್ರಭು. ನಾನು ಅವನ ಮೇಲೆ ಭರವಸೆಯನ್ನು ಇರಿಸಿದ್ದೇನೆ. ಮತ್ತು ಅವನ ಕಡೆಗೆ ನಾನು ಮರಳುತ್ತೇನೆ.
(11) ಅವನು ಆಕಾಶಗಳ ಮತ್ತು ಭೂಮಿಯ ಸೃಷ್ಟಿಕರ್ತ. ಅವನು ನಿಮ್ಮ ವರ್ಗದಿಂದಲೇ ನಿಮಗಾಗಿ ಜೋಡಿಗಳನ್ನು ಸೃಷ್ಟಿಸಿದ್ದಾನೆ ಮತ್ತು ಪ್ರಾಣಿಗಳಲ್ಲಿಯು ಜೋಡಿಗಳನ್ನುಂಟು ಮಾಡಿದ್ದಾನೆ. ತನ್ಮೂಲಕ ಅವನು ನಿಮ್ಮನ್ನು ಭೂಮಿಯಲ್ಲಿ ಹಬ್ಬಿಸುತ್ತಾನೆ. ಅವನಂತಹ ಯಾವೊಂದು ವಸ್ತುವೂ ಇಲ್ಲ. ಅವನು ಸರ್ವವನ್ನಾಲಿಸುವವನೂ, ನೋಡುವವನೂ ಆಗಿದ್ದಾನೆ.
(12) ಆಕಾಶಗಳ ಮತ್ತು ಭೂಮಿಯ ಕೀಲಿಕೈಗಳು ಅವನ ಬಳಿಯಿವೆ. ಅವನು ತಾನಿಚ್ಛಿಸುವವರಿಗೆ ಜೀವನಾಧಾರವನ್ನು ವಿಶಾಲಗೊಳಿಸುತ್ತಾನೆ ಮತ್ತು ತಾನಿಚ್ಛಿಸುವವರಿಗೆ ಪರಿಮಿತಗೊಳಿಸುತ್ತಾನೆ. ಖಂಡಿತವಾಗಿಯು ಅವನು ಸಕಲ ವಿಷಯಗಳ ಜ್ಞಾನಿಯಾಗಿದ್ದಾನೆ.
(13) ಅಲ್ಲಾಹನು ನೂಹ್ರವರಿಗೆ ಅಜ್ಞಾಪಿಸಿದ ಧರ್ಮವನ್ನೇ ನಿಮಗೋಸ್ಕರ ನಿಶ್ಚಯಿಸಿದ್ದಾನೆ ಮತ್ತು ಅದನ್ನು ನಾವು ದಿವ್ಯ ಸಂದೇಶದ ಮುಖಾಂತರ ನಿಮ್ಮೆಡೆಗೆ ಕಳುಹಿಸಿರುತ್ತೇವೆ ಮತ್ತು ಇದೇ ಆದೇಶವನ್ನು ನಾವು ಇಬ್ರಾಹೀಮ್, ಮೂಸಾ ಮತ್ತು ಈಸಾರವರಿಗೆ ನೀಡಿದೆವು ಮತ್ತು ಈ ಧರ್ಮವನ್ನು ಸಂಸ್ಥಾಪಿಸಿರಿ ಮತ್ತು ಇದರಲ್ಲಿ ನೀವು ಭಿನ್ನತೆಯನ್ನುಂಟು ಮಾಡಬೇಡಿರಿ ಎಂದು. ಇನ್ನು ನೀವು ಯಾವ ವಿಷಯದೆಡೆಗೆ ಈ ಬಹುದೇವಾರಾಧಕರನ್ನು ಅಹ್ವಾನಿಸುತ್ತಿರುವಿರೋ ಅದು ಅವರಿಗೆ ದೊಡ್ಡ ಭಾರವಾಗಿ ತೋರುತ್ತಿದೆ. ಅಲ್ಲಾಹನು ತಾನಿಚ್ಛಿಸುವವರನ್ನು ಆಯ್ದುಕೊಳ್ಳುತ್ತಾನೆ. ಅವನೆಡೆಗೆ ಮರಳುವವರಿಗೆ ಅವನು ನೇರ ಮಾರ್ಗದಲ್ಲಿ ಮುನ್ನಡೆಸುತ್ತಾನೆ.
(14) ಅವರು ತಮ್ಮ ಬಳಿ ಜ್ಞಾನ ಬಂದ ಬಳಿಕ ತಮ್ಮ ಪರಸ್ಪರ ವಿರೋಧದಿಂದಾಗಿ ಭಿನ್ನತೆ ತೋರಿದರು ನಿಮ್ಮ ಪ್ರಭುವಿನಿಂದ ಅವರ ಕುರಿತು ಒಂದು ನಿಶ್ಚಿತ ಅವಧಿಯವರೆಗೆ ಕಾಲಾವಕಾಶ ನೀಡಲಾಗುವ ಮಾತು ಮೊದಲೇ ನಿರ್ಧರಿತವಾಗಿಲ್ಲದಿರುತ್ತಿದ್ದರೆ ಖಂಡಿತ ಅವರ ನಡುವೆ ತೀರ್ಮಾನ ಮಾಡಿಬಿಡಲಾಗುತ್ತಿತ್ತು. ಅವರ ಬಳಿಕ ಗ್ರಂಥದ ವಾರಿಸುದಾರರಾದವರು ಅವರ ಕುರಿತು ಗೊಂದಲಕಾರಿ ಸಂದೇಹದಲ್ಲಿದ್ದಾರೆ.
(15) ಆದ್ದರಿಂದ ನೀವು ಇದೇ ಧರ್ಮದೆಡೆಗೇ ಕರೆಯುತ್ತಿರಿ ಮತ್ತು ನಿಮಗೆ ಆಜ್ಞಾಪಿಸಲಾದಂತೆ ಅದರಲ್ಲೇ ಸ್ಥಿರವಾಗಿರಿ ಮತ್ತು ಅವರ ಸ್ವೇಚ್ಛೆಗಳನ್ನು ಹಿಂಬಾಲಿಸದಿರಿ ಹಾಗೂ ಹೇಳಿರಿ: ಅಲ್ಲಾಹನು ಅವತೀರ್ಣಗೊಳಿಸಿದ ಪ್ರತಿಯೊಂದು ಗ್ರಂಥದ ಮೇಲೆ ನಾನು ವಿಶ್ವಾಸವಿಟ್ಟಿದ್ದೇನೆ ಮತ್ತು ನಿಮ್ಮ ನಡುವೆ ನ್ಯಾಯಪಾಲಿಸುತ್ತಿರಲು ನನ್ನೊಂದಿಗೆ ಅಜ್ಞಾಪಿಸಲಾಗಿದೆ. ನಮ್ಮ ಮತ್ತು ನಿಮ್ಮ ಪ್ರಭು ಅಲ್ಲಾಹನಾಗಿದ್ದಾನೆ. ನಮ್ಮ ಕರ್ಮಗಳು ನಮಗಿರುವುವು ಮತ್ತು ನಿಮ್ಮ ಕರ್ಮಗಳು ನಿಮಗಿರುವುವು. ನಮ್ಮ ಮತ್ತು ನಿಮ್ಮ ನಡುವೆ ಜಗಳವೂ ಇಲ್ಲ. ಅಲ್ಲಾಹನು ನಮ್ಮನ್ನು ಒಟ್ಟುಗೂಡಿಸುವನು ಮತ್ತು ಅವನೆಡೆಗೇ ಮರಳಲಿಕ್ಕಿದೆ.
(16) ಮತ್ತು ಯಾರು ಅಲ್ಲಾಹನ ಧರ್ಮವು ಸ್ವೀಕೃತಗೊಂಡ ಬಳಿಕ ಅದರಲ್ಲಿ ತರ್ಕಿಸುತ್ತಾರೋ ಅವರ ತರ್ಕ ಅಲ್ಲಾಹನ ಬಳಿ ನಿರರ್ಥಕವಾಗಿದೆ. ಅವರ ಮೇಲೆ ಕ್ರೋಧವಿದೆ ಮತ್ತು ಅವರಿಗೆ ಕಠಿಣ ಶಿಕ್ಷೆಯಿರುವುದು.
(17) ಸತ್ಯದೊಂದಿಗೆ ಗ್ರಂಥವನ್ನು ಮತ್ತು ತಕ್ಕಡಿಯನ್ನು ಇಳಿಸಿದವನು ಅಲ್ಲಾಹನೇ. ನಿಮಗೇನು ಗೊತ್ತು? ಆ ಅಂತ್ಯಗಳಿಗೆಯು ಸಮೀಪದಲ್ಲೇ ಇರಬಹುದು.
(18) ಅದರಲ್ಲಿ ಪ್ರಳಯದಿನದಲ್ಲಿ ವಿಶ್ವಾಸವಿಡದವರು ಅದರ ಕುರಿತು ಆತುರಪಡುತ್ತಿದ್ದಾರೆ. ಆದರೆ ಅದನ್ನು ನಂಬುವವರು ಅದರ ಕುರಿತು ಭಯಪಡುತ್ತಾರೆ ಮತ್ತು ಅದು ಸತ್ಯವೆಂದು ಅರಿತಿದ್ದಾರೆ. ತಿಳಿಯಿರಿ! ಯಾರು ಅಂತ್ಯಗಳಿಗೆಯ ವಿಷಯದಲ್ಲಿ ತರ್ಕಿಸುವರೋ ಅವರು ಬಹುದೂರದ ಪಥಭ್ರಷ್ಟತೆಯಲ್ಲಿದ್ದಾರೆ.
(19) ಅಲ್ಲಾಹನು ತನ್ನ ದಾಸರ ಮೇಲೆ ಮಹಾ ಕರುಣೆಯುಳ್ಳವನಾಗಿದ್ದಾನೆ. ಅವನು ತಾನಿಚ್ಛಿಸುವವರಿಗೆ ಜೀವನಾಧಾರವನ್ನು ನೀಡುತ್ತಾನೆ. ಅವನು ಬಲಿಷ್ಠನೂ, ಪ್ರತಾಪಶಾಲಿಯೂ ಆಗಿದ್ದಾನೆ.
(20) ಯಾರು ಪರಲೋಕದ ಕೃಷಿಯನ್ನು ಬಯಸುತ್ತಾನೋ ಅವನ ಕೃಷಿಯಲ್ಲಿ ನಾವು ಅವನಿಗಾಗಿ ಅಭಿವೃದ್ಧಿಯನ್ನು ನೀಡುತ್ತೇವೆ ಯಾರು ಲೌಕಿಕ ಕೃಷಿಯನ್ನು ಬಯಸುತ್ತಾನೋ ಅವನಿಗೆ ನಾವು ಅದರಿಂದ ಸ್ವಲ್ಪ ಭಾಗ ನೀಡುತ್ತೇವೆ. ಆದರೆ ಪರಲೋಕದಲ್ಲಿ ಅವನಿಗೆ ಯಾವ ಪಾಲೂ ಇರುವುದಿಲ್ಲ..
(21) ಅಲ್ಲಾಹನು ಅನುಮತಿಸದೇ ಇರುವಂತಹ ಧರ್ಮಶಾಸನಗಳನ್ನು ಅವರಿಗೆ ನಿಶ್ಚಯಿಸಿರುವ ಸಹಭಾಗಿಗಳು ಇದ್ದಾರೆಯೇ? ತೀರ್ಪಿನ ದಿನದ ವಾಗ್ದಾನವು ಇಲ್ಲದಿರುತ್ತಿದ್ದರೆ ಅವರ ಮಧ್ಯೆ ತೀರ್ಮಾನ ಮಾಡಿಬಿಡಲಾಗುತ್ತಿತ್ತು. ಖಂಡಿತವಾಗಿಯೂ ಅಕ್ರಮಿಗಳಿಗೆ ಯಾತನಾಮಯ ಶಿಕ್ಷೆಯಿರುವುದು.
(22) ಓ ಸಂದೇಶವಾಹಕರೇ, ಅಕ್ರಮಿಗಳು ತಮ್ಮ ಕರ್ಮಗಳ ಕುರಿತು ಭಯಭೀತರಾಗಿರುವುದಾಗಿ ನೀವು ಕಾಣುವಿರಿ. ಅದರ ವಿಪತ್ತು ಅವರಿಗೆ ಸಂಭವಿಸೇ ತೀರುವುದು. ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕೈಗೊಳ್ಳುವವರು ಸ್ವರ್ಗೋದ್ಯಾನಗಳಲ್ಲಿರುವರು. ಅವರು ಬಯಸಿದ್ದೆಲ್ಲವನ್ನೂ ತಮ್ಮ ಪ್ರಭುವಿನ ಬಳಿ ಪಡೆಯುವರು. ಇದುವೇ ಮಹಾ ಅನುಗ್ರಹವಾಗಿದೆ.
(23) ಇದು ಸತ್ಯವಿಶ್ವಾಸವಿರಿಸಿ ಸತ್ಕರ್ಮವೆಸಗಿದ ತನ್ನ ದಾಸರಿಗೆ ಅಲ್ಲಾಹನು ನೀಡುವ ಶುಭವಾರ್ತೆಯಾಗಿದೆ. ಹೇಳಿರಿ: ನಾನು ಈ ಕಾರ್ಯಕ್ಕಾಗಿ ನಿಮ್ಮಿಂದ ಯಾವುದೇ ಪ್ರತಿಫಲವನ್ನು ಕೇಳುತ್ತಿಲ್ಲ. ಆದರೆ ಬಾಂಧವ್ಯ ಸಾಮಿಪ್ಯದ ಪ್ರೀತಿಯ ಹೊರತು. ಯಾರಾದರೂ ಒಳಿತು ಮಾಡಿದರೆ ನಾವು ಅವನ ಒಳಿತಿನಲ್ಲಿ ಇನ್ನಷ್ಟು ವೃದ್ಧಿಸಿ ಕೊಡುವೆವು. ನಿಸ್ಸಂದೇಹವಾಗಿಯು ಅಲ್ಲಾಹನು ಕ್ಷಮಿಸುವವನೂ, ಕೃತಜ್ಞನೂ ಆಗಿದ್ದಾನೆ.
(24) ಪೈಗಂಬರರು ಅಲ್ಲಾಹನ ಮೇಲೆ ಸುಳ್ಳಾರೋಪ ಮಾಡಿರುವರೆಂದು ಅವರು ಹೇಳುತ್ತಿದ್ದಾರೆಯೇ? ಅಲ್ಲಾಹನು ಇಚ್ಛಿಸುತ್ತಿದ್ದರೆ ನಿಮ್ಮ ಹೃದಯದ ಮೇಲೆ ಮುದ್ರೆಯೊತ್ತಿ ಬಿಡುತ್ತಿದ್ದನು ಅವನು ಮಿಥ್ಯವನ್ನು ಅಳಿಸುತ್ತಾನೆ. ಮತ್ತು ತನ್ನ ವಚನಗಳ ಮೂಲಕ ಸತ್ಯವನ್ನು ದೃಢಗೊಳಿಸುತ್ತಾನೆ. ನಿಶ್ಚಯವಾಗಿಯು ಅವನು ಹೃದಯಗಳಲ್ಲಿರುವ ವಿಚಾರಗಳನ್ನು ಚೆನ್ನಾಗಿ ಬಲ್ಲನು.
(25) ತನ್ನ ದಾಸರ ಪಶ್ಚಾತ್ತಾಪವನ್ನು ಸ್ವೀಕರಿಸುವವನು ಮತ್ತು ಪಾಪಗಳನ್ನು ಮನ್ನಿಸುವವನು ಅವನೇ. ಮತ್ತು ನೀವು ಮಾಡುತ್ತಿರುವುದನ್ನು ಅವನು ಚೆನ್ನಾಗಿ ಬಲ್ಲನು.
(26) ಸತ್ಯವಿಶ್ವಾಸಿಗಳ ಹಾಗೂ ಸತ್ಕರ್ಮಿಗಳ ಪ್ರಾರ್ಥನೆಗೆ ಅವನು ಓಗೊಡುತ್ತಾನೆ ಮತ್ತು ತನ್ನ ಅನುಗ್ರಹದಿಂದ ಅವರಿಗೆ ಇನ್ನಷ್ಟು ಹೆಚ್ಚು ನೀಡುತ್ತಾನೆ. ಇನ್ನು ಸತ್ಯನಿಷೇಧಿಗಳಿಗೆ ಕಠಿಣ ಶಿಕ್ಷೆಯಿರುವುದು.
(27) ಅಲ್ಲಾಹನು ತನ್ನ ಸಕಲ ದಾಸರ ಜೀವನಾಧಾರವನ್ನು ವಿಶಾಲಗೊಳಿಸಿರುತ್ತಿದ್ದರೆ ಅವರು ಭೂಮಿಯಲ್ಲಿ ಕ್ಷೆÆÃಭೆಯನ್ನು ಹರಡುತ್ತಿದ್ದರು. ಆದರೆ ಅವನು ನಿಶ್ಚಿತ ಪ್ರಮಾಣದೊಂದಿಗೆ ತಾನಿಚ್ಛಿಸುವುದನ್ನು ಇಳಿಸುತ್ತಾನೆ ನಿಶ್ಚಯವಾಗಿಯೂ ಅವನು ತನ್ನ ದಾಸರ ಕುರಿತು ಸಂಪೂರ್ಣವಾಗಿ ಅರಿವುಳ್ಳವನೂ, ಚೆನ್ನಾಗಿ ನೋಡುವವನೂ ಆಗಿದ್ದಾನೆ.
(28) ಜನರು ನಿರಾಶರಾದ ಬಳಿಕ ಮಳೆ ಸುರಿಸುವವನು ಮತ್ತು ತನ್ನ ಕೃಪೆಯನ್ನು ಹರಡುವವನು ಅವನೇ, ಅವನು ಸ್ತುತ್ಯಾರ್ಹನಾದ ರಕ್ಷಕ ಮಿತ್ರನಾಗಿರುವನು.
(29) ಆಕಾಶಗಳ ಮತ್ತು ಭೂಮಿಯ ಸೃಷ್ಠಿ ಹಾಗೂ ಅವುಗಳಲ್ಲಿ ಜೀವಜಾಲಗಳನ್ನು ಹರಡಿಸಿರುವುದು ಅವನ ನಿದರ್ಶÀನಗಳಲ್ಲಾಗಿದೆ. ತಾನಿಚ್ಛಿಸಿದಾಗ ಅವನು ಅವುಗಳನ್ನು ಒಟ್ಟುಗೂಡಿಸಲು ಸಾಮರ್ಥ್ಯವುಳ್ಳವನಾಗಿದ್ದಾನೆ.
(30) ನಿಮಗೆ ಯಾವುದೇ ವಿಪತ್ತು ಬಂದರೂ ಅದು ನಿಮ್ಮ ಕೃತ್ಯಗಳ ಪರಿಣಾಮವಾಗಿರುತ್ತದೆ ಅವನು ಅನೇಕ ಪಾಪಗಳನ್ನು ಹಾಗೆಯೇ ಕ್ಷಮಿಸಿ ಬಿಡುತ್ತಾನೆ.
(31) ನೀವು ನಮ್ಮನ್ನು ಭೂಮಿಯಲ್ಲಿ ಸೋಲಿಸುವವರಲ್ಲ. ನಿಮಗೆ ಅಲ್ಲಾಹನ ಹೊರತು ಇನ್ನಾವ ರಕ್ಷಕನಾಗಲಿ, ಸಹಾಯಕನಾಗಲಿ ಇಲ್ಲ.
(32) ಸಮುದ್ರದಲ್ಲಿ ಪರ್ವತಗಳಂತೆ ಚಲಿಸುತ್ತಿರುವ ಹಡಗುಗಳು ಅವನ ನಿದರ್ಶನಗಳಲ್ಲಾಗಿವೆ.
(33) ಅವನು ಇಚ್ಛಿಸಿದರೆ ಗಾಳಿಯನ್ನು ಸ್ತಬ್ಧಗೊಳಿಸುವನು. ಸಮುದ್ರದ ಮೇಲೆ ಹಡಗುಗಳು ನಿಂತಲ್ಲೇ ನಿಂತುಬಿಡುವುವು. ಖಂಡಿತವಾಗಿಯೂ ಇದರಲ್ಲಿ ಸಹನಾಶೀಲನಾದ ಪ್ರತಿಯೊಬ್ಬ ಕೃತಜ್ಞನಿಗೆ ದೃಷ್ಟಾಂತಗಳಿವೆ.
(34) ಅಥವಾ ಅವನು ಅವರನ್ನು ಅವರ ಕೃತ್ಯಗಳ ನಿಮಿತ್ತ ಮುಳುಗಿಸಿ ಬಿಡಬಹುದು. ಅವನಂತು ಅನೇಕ ಪಾಪಗಳನ್ನು ಕ್ಷಮಿಸಿ ಬಿಡುತ್ತಾನೆ.
(35) ಇದು ನಮ್ಮ ದೃಷ್ಟಾಂತಗಳಲ್ಲಿ ತರ್ಕಿಸು ವವರಿಗೆ ತಮಗೆ ಎಲ್ಲೂ ಅಭಯ ಸ್ಥಾನವಿಲ್ಲವೆಂದು ಮನದಟ್ಟಾಗಲೆಂದಾಗಿದೆ.
(36) ನಿಮಗೆ ನೀಡಲಾಗಿರುವುದೆಲ್ಲವೂ ಕೇವಲ ಐಹಿಕ ಜೀವನದ ತಾತ್ಕಾಲಿಕ ಜೀವನಾನುಕೂಲತೆಗಳಾಗಿವೆ ಮತ್ತು ಅಲ್ಲಾಹನ ಬಳಿಯಿರುವುದೆಲ್ಲವೂ ಅತ್ಯುತ್ತಮವೂ, ಶಾಶ್ವತವೂ ಆಗಿರುತ್ತದೆ. ಅದು ಸತ್ಯವಿಶ್ವಾಸವಿರಿಸಿ, ತಮ್ಮ ಪ್ರಭುವಿನ ಮೇಲೆಯೇ ಭರವಸೆಯಿಡುವರಿಗೆ ಮಾತ್ರವಿರುವುದು.
(37) ಅವರು ಮಹಾಪಾಪ ಗಳಿಂದ ಮತ್ತು ನಿರ್ಲಜ್ಜೆಯ ಕೃತ್ಯಗಳಿಂದ ದೂರವಿರುವವರು ಮತ್ತು ಸಿಟ್ಟು ಬಂದಾಗ ಕ್ಷಮಿಸುವವರಾಗಿದ್ದಾರೆ.
(38) ಅವರು ತಮ್ಮ ಪ್ರಭುವಿನ ಆಜ್ಞೆಯನ್ನು ಪಾಲಿಸುತ್ತಾರೆ, ನಮಾಝನ್ನು ಸಂಸ್ಥಾಪಿಸುತ್ತಾರೆ ಅವರ ವ್ಯವಹಾರವು ಪರಸ್ಪರ ಸಮಾಲೋಚನೆಯಿಂದ ನಡೆಯುತ್ತದೆ. ಮತ್ತು ನಾವು ಅವರಿಗೆ ನೀಡಿರುವುದರಿಂದ ನಮ್ಮ ಮಾರ್ಗದಲ್ಲಿ ಖರ್ಚು ಮಾಡುತ್ತಾರೆ.
(39) ಅವರ ಮೇಲೆ ದುಷ್ಟರ ದೌರ್ಜನ್ಯ ನಡೆದರೆ ಅವರು ಅವನಿಂದ ಪ್ರತಿಕಾರ ಪಡೆಯುತ್ತಾರೆ.
(40) ಕೆಡುಕಿನ ಪ್ರತಿಫಲವು ಅದಕ್ಕೆ ಸಮಾನವಾಗಿರುವ ಕೆಡುಕಾಗಿದೆ. ಇನ್ನು ಯಾರಾದರೂ ಕ್ಷಮಿಸಿ ಸುಧಾರಿಸಿಕೊಂಡರೆ ಅವನ ಪ್ರತಿಫಲದ ಹೊಣೆ ಅಲ್ಲಾಹನ ಮೇಲಿದೆ. ಖಂಡಿತವಾಗಿಯೂ ಅವನು ಅಕ್ರಮಿಗಳನ್ನು ಮೆಚ್ಚುವುದಿಲ್ಲ.
(41) ಯಾರಾದರು ತಾನು ದೌರ್ಜನ್ಯಕ್ಕೊಳಗಾದ ನಂತರ ಪ್ರತಿಕಾರ ಕೈಗೊಂಡರೆ ಅವರ ಮೇಲೆ ಅಪವಾದವಿಲ್ಲ.
(42) ವಾಸ್ತವದಲ್ಲಿ ಇತರರ ಮೇಲೆ ಅಕ್ರಮವೆಸಗುತ್ತಾ ಭೂಮಿಯಲ್ಲಿ ಅನ್ಯಾಯವಾಗಿ ಕ್ಷೆÆÃಭೆ ಹರಡುವವರ ಮೇಲೆ ಅಪವಾದವಿರುವುದು. ಅವರಿಗೆ ವೇದನಾಜನಕ ಶಿಕ್ಷೆಯಿರುವುದು.
(43) ಇನ್ನು ಯಾರಾದರೂ ಸಹನೆ ಪಾಲಿಸುತ್ತಾ ಕ್ಷಮಿಸಿದರೆ ಖಂಡಿತವಾಗಿಯು ಇದು ಮಹಾ ಧೈರ್ಯದ ಕಾರ್ಯಗಳಲ್ಲಿ ಸೇರಿದೆ.
(44) ಯಾರನ್ನು ಅಲ್ಲಾಹನು ಪಥಭ್ರಷ್ಟಗೊಳಿಸುತ್ತಾನೋ ಅನಂತರ ಅವನಿಗೆ ಯಾವ ರಕ್ಷಕನೂ ಇಲ್ಲ. ಮತ್ತು ಅಕ್ರಮಿಗಳು ಶಿಕ್ಷೆಯನ್ನು ಕಂಡು “ಮರಳಿ ಹೋಗಲು ಯಾವುದಾದರೂ ದಾರಿಯಿದೆಯೇ” ಎಂದು ಹೇಳುತ್ತಿರುವುದನ್ನು ನೀವು ಕಾಣುವಿರಿ.
(45) ಅವರನ್ನು ಅಪಮಾನದ ನಿಮಿತ್ತ ತಲೆತಗ್ಗಿಸಿದವರಾಗಿ ನರಕದ ಮುಂದೆ ತರಲಾಗುವುದನ್ನು ನೀವು ಕಾಣಲಿರುವಿರಿ ಅವರು ಕುಡಿನೋಟದಿಂದ ನೋಡುತ್ತಿರುವರು. ಸತ್ಯವಿಶ್ವಾಸಿಗಳು ಹೇಳುವರು: ಪುನರುತ್ಥಾನ ದಿನದಂದು ಸ್ವತಃ ತನ್ನನ್ನು ಮತ್ತು ತನ್ನ ಮನೆಯವರನ್ನು ನಷ್ಟಕ್ಕೀಡಾಗಿಸಿದವರೇ ವಾಸ್ತವದಲ್ಲಿ ನಷ್ಟ ಹೊಂದಿದವರಾಗಿದ್ದಾರೆ ತಿಳಿಯಿರಿ! ಖಂಡಿತವಾಗಿಯು ಅಕ್ರಮಿಗಳು ಶಾಶ್ವತವಾದ ಶಿಕ್ಷೆಯಲ್ಲಿರುವರು.
(46) ಅಲ್ಲಾಹನಿಗೆದುರಾಗಿ ಅವರಿಗೆ ಸಹಾಯವೊದಗಿಸುವ ಯಾವ ರಕ್ಷಕರೂ ಅವರಿಗಿರಲಾರರು. ಅಲ್ಲಾಹನು ಯಾರನ್ನು ಪಥಭ್ರಷ್ಟಗೊಳಿಸುತ್ತಾನೋ ಅವನಿಗೆ ಯಾವ ಮಾರ್ಗವೂ ಇರಲಾರದು.
(47) ಯಾರಿಂದಲೂ ತಡೆದಿರಿಸಲಾಗದ ಅಲ್ಲಾಹನ ಕಡೆಯಿಂದಿರುವ ಆ ದಿನ ಬರುವುದಕ್ಕೆ ಮುಂಚೆ ನೀವು ನಿಮ್ಮ ಪ್ರಭುವಿನ ಕರೆಗೆ ಓಗೊಡಿರಿ; ಅಂದು ನಿಮಗೆ ಯಾವುದೇ ಅಭಯ ಸ್ಥಾನವಿರದು. ಮತ್ತು ನಿಮಗೆ ನಿಮ್ಮ ಅಪರಾಧಗಳನ್ನು ನಿರಾಕರಿಸಲೂ ಸಾಧ್ಯವಾಗದು.
(48) ಇನ್ನು ಅವರೇನಾದರೂ ವಿಮುಖರಾದರೆ ನಾವು ನಿಮ್ಮನ್ನು ಅವರ ಮೇಲ್ವಿಚಾರಕರಾಗಿ ಕಳುಹಿಸಿರುವುದಿಲ್ಲ. ನಿಮ್ಮ ಮೇಲೆ ಸಂದೇಶವನ್ನು ತಲುಪಿಸುವ ಹೊಣೆ ಮಾತ್ರವಿದೆ. ನಿಶ್ಚಯವಾಗಿಯೂ ನಾವು ಮನುಷ್ಯನಿಗೆ ನಮ್ಮ ಕೃಪೆಯಿಂದ ಸವಿಯನ್ನುಣಿಸಿದರೆ ಅವನು ಅದರ ನಿಮಿತ್ತ ಬೀಗುತ್ತಾನೆ. ಮತ್ತು ಅವರಿಗೆ ಅವರ ಕರ್ಮಗಳ ನಿಮಿತ್ತ ಯಾವುದಾದರೂ ಆಪತ್ತು ಬಾಧಿಸಿದರೆ ನಿಸ್ಸಂಶಯವಾಗಿಯೂ ಮನುಷ್ಯನು ಮಹಾ ಕೃತಘ್ನನಾಗಿ ಬಿಡುತ್ತಾನೆ.
(49) ಆಕಾಶಗಳ ಮತ್ತು ಭೂಮಿಯ ಅಧಿಪತ್ಯವು ಅಲ್ಲಾಹನದ್ದಾಗಿದೆ. ಅವನು ತಾನಿಚ್ಛಿಸುವುದನ್ನು ಸೃಷ್ಟಿಸುತ್ತಾನೆ. ತಾನಿಚ್ಛಿಸುವವರಿಗೆ ಹೆಣ್ಣುಮಕ್ಕಳನ್ನು ದಯಪಾಲಿಸುತ್ತಾನೆ ಮತ್ತು ತಾನಿಚ್ಛಿಸುವವರಿಗೆ ಗಂಡು ಮಕ್ಕಳನ್ನು ನೀಡುತ್ತಾನೆ.
(50) ಅಥವಾ ತಾನಿಚ್ಛಿಸುವವರಿಗೆ ಗಂಡು ಹೆಣ್ಣು ಎರಡನ್ನೂ, ಸೇರಿಸಿ ಕೊಡುತ್ತಾನೆ. ಮತ್ತು ತಾನಿಚ್ಛಿಸುವವರನ್ನು ಬಂಜೆಯಾಗಿ ಮಾಡುತ್ತಾನೆ. ಖಂಡಿತವಾಗಿಯು ಅವನು ಸರ್ವಜ್ಞನೂ, ಸರ್ವಶಕ್ತನೂ ಆಗಿದ್ದಾನೆ.
(51) ಅಲ್ಲಾಹನು ಯಾವೊಬ್ಬ ದಾಸನೊಂದಿಗೆ ಮಾತನಾಡುವುದು ಅಸಂಭವವಾಗಿದೆ. ಆದರೆ ದಿವ್ಯವಾಣಿಯ ಮೂಲಕ ಅಥವಾ ತೆರೆಯ ಹಿಂದಿನಿAದ ಅಥವಾ ಒಬ್ಬ ದೂತನನ್ನು ಕಳುಹಿಸುವುದರ ಮೂಲಕ ಆ ದೂತನು ಅಲ್ಲಾಹನ ಅಪ್ಪಣೆ ಪ್ರಕಾರ ಅವನು ಉದ್ದೇಶಿಸಿರುವುದರ ಸಂದೇಶ ಕೊಡುತ್ತಾನೆ. ನಿಸ್ಸಂಶಯವಾಗಿಯು ಅವನು ಉನ್ನತನೂ, ಯುಕ್ತಿಪೂರ್ಣನೂ ಆಗಿದ್ದಾನೆ.
(52) ಇದೇ ಪ್ರಕಾರ ನಾವು ನಮ್ಮ ಅಪ್ಪಣೆಯಿಂದ ನಿಮ್ಮೆಡೆಗೆ ರೂಹನ್ನು (ಕುರ್ಆನ್) ಅವತೀರ್ಣಗೊಳಿಸಿದೆವು. ಇದಕ್ಕೆ ಮೊದಲು ನೀವು ಗ್ರಂಥವೇನೆAದು, ಸತ್ಯವಿಶ್ವಾಸವೇನೆಂದು ತಿಳಿದಿರಲಿಲ್ಲ. ಆದರೆ ನಾವದನ್ನು ಒಂದು ಪ್ರಕಾಶವನ್ನಾಗಿ ಮಾಡಿದೆವು. ಅದರ ಮೂಲಕ ನಮ್ಮ ದಾಸರ ಪೈಕಿ ನಾವಿಚ್ಛಿಸುವವರಿಗೆ ಸನ್ಮಾರ್ಗ ನೀಡುತ್ತೇವೆ. ಖಂಡಿತವಾಗಿಯು ನೀವು ಸನ್ಮಾರ್ಗದೆಡೆಗೆ ಮಾರ್ಗದರ್ಶನ ನೀಡುತ್ತಿರುವಿರಿ.
(53) ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಸಕಲ ವಸ್ತುಗಳ ಅಧಿಪತಿಯಾದ ಅಲ್ಲಾಹನ ಮಾರ್ಗದೆಡೆಗೆ, ಎಚ್ಚರವಿರಲಿ! ಸಕಲ ಕಾರ್ಯಗಳೂ ಅಲ್ಲಾಹನೆಡೆಗೇ ಮರುಳುತ್ತವೆ.