(1) ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಸಕಲ ವಸ್ತುಗಳ ಒಡೆಯನಾದ ಅಲ್ಲಾಹನಿಗೇ ಸರ್ವಸ್ತುತಿಯು ಮೀಸಲು ಮತ್ತು ಅವನಿಗೇ ಪರಲೋಕದಲ್ಲಿ ಸರ್ವಸ್ತುತಿಯು ಮೀಸಲಿರುವುದು. ಅವನು ಯುಕ್ತಿಪೂರ್ಣನೂ, ವಿವರಪೂರ್ಣನೂ ಆಗಿದ್ದಾನೆ.
(2) ಭೂಮಿಯಲ್ಲಿ ಪ್ರವೇಶಿಸುವ ಮತ್ತು ಅದರಿಂದ ಹೊರಬರುವ, ಆಕಾಶದಿಂದ ಇಳಿಯುವ ಮತ್ತು ಅದರಲ್ಲಿ ಏರಿ ಹೋಗುವ ಎಲ್ಲವನ್ನೂ ಅವನು ಅರಿಯುತ್ತಾನೆ ಮತ್ತು ಅವನು ಕರುಣಾಮಯಿಯು, ಕ್ಷಮಾಶೀಲನೂ ಆಗಿದ್ದಾನೆ.
(3) ಅಂತ್ಯಗಳಿಗೆ (ಪ್ರಳಯ) ನಮ್ಮಲ್ಲಿಗೆ ಬರಲಾರದು ಎಂದು ಸತ್ಯನಿಷೇಧಿಗಳು ಹೇಳುತ್ತಾರೆ. ಹೇಳಿರಿ: ಅಲ್ಲ ಅಗೋಚರ ಜ್ಞಾನಿಯಾದ ನನ್ನ ಪ್ರಭುವಿನಾಣೆ! ಅದು ನಿಮ್ಮಲ್ಲಿಗೆ ಖಂಡಿತ ಬರುವುದು. ಅಲ್ಲಾಹನಿಂದ ಆಕಾಶಗಳಲ್ಲಾಗಲೀ ಭೂಮಿಯಲ್ಲಾಗಲೀ, ಅಣೂತೂಕದಷ್ಟಾದರೂ ಸರಿ ಮರೆಯಾಗಿರುವುದಿಲ್ಲ. ಮತ್ತು ಅದಕ್ಕಿಂತ ಚಿಕ್ಕದಿರಲಿ, ಇಲ್ಲವೇ ದೊಡ್ಡದಿರಲಿ ಎಲ್ಲವೂ ಸುಸ್ಪಷ್ಟ ದಾಖಲೆಯಲ್ಲಿದೆ.
(4) ಪ್ರಳಯ ಬರುವುದು ಸತ್ಯವಿಶ್ವಾಸವಿರಿಸಿ, ಸತ್ಕರ್ಮಗಳನ್ನು ಕೈಗೊಂಡವರಿಗೆ ಪ್ರತಿಫಲ ನೀಡಲೆಂದಾಗಿರುತ್ತದೆ. ಅವರಿಗೆ ಕ್ಷಮೆ ಹಾಗೂ ಸನ್ಮಾನ್ಯ ಜೀವನಾಧಾರ ವಿರುವುದು.
(5) ನಮ್ಮನ್ನು ಸೋಲಿಸಬಲ್ಲವೆಂಬ ಕಲ್ಪನೆಯಲ್ಲಿ ನಮ್ಮ ಸೂಕ್ತಿಗಳ ವಿರುದ್ಧ ಪ್ರಯತ್ನ ಪಟ್ಟಿರುವವರಿಗೆ ಅತಿ ನಿಕೃಷ್ಟವಾದ ವೇದನಾಜನಕ ಶಿಕ್ಷೆೆಯಿರುವುದು.
(6) (ಓ ಪೈಗಂಬರರೇ) ನಿಮ್ಮೆಡೆಗೆ ತಮ್ಮ ಪ್ರಭುವಿನ ಕಡೆಯಿಂದ ಅವತೀರ್ಣಗೊಂಡಿರುವುದು ಸತ್ಯವಾಗಿದೆಯೆಂದು ಮತ್ತು ಇದು ಪ್ರಚಂಡನೂ ಸ್ತುತ್ಯರ್ಹನೂ ಆದ ಅಲ್ಲಾಹನ ಮಾರ್ಗದೆಡೆಗೆ ಮುನ್ನಡೆಸುತ್ತದೆಂದು ಜ್ಞಾನ ನೀಡಲ್ಪಟ್ಟವರು ಮಾತ್ರ ತಿಳಿಯುತ್ತಾರೆ.
(7) ಮತ್ತು ಸತ್ಯನಿಷೇಧಿಗಳು ಹೇಳಿದರು: ನೀವು ಸಂಪೂರ್ಣವಾಗಿ ಛಿದ್ರ ಛಿದ್ರವಾದ ಬಳಿಕವೂ ಪುನಃ ಹೊಸದಾಗಿ ಸೃಷ್ಟಿಸಲ್ಪಡುವಿರೆಂದು ಹೇಳುವ ಒಬ್ಬ ವ್ಯಕ್ತಿಯನ್ನು ನಾವು ನಿಮಗೆ ತಿಳಿಸಕೊಡಲೇ.
(8) ಸ್ವತಃ ಇವನೇ ಅಲ್ಲಾಹನ ಮೇಲೆ ಸುಳ್ಳು ಸೃಷ್ಟಿಸಿರುವನೊ ಅಥವಾ ಇವನಿಗೇನಾದರೂ ಹುಚ್ಚು ಹಿಡಿದಿದೆಯೋ ಹಾಗಲ್ಲ ವಾಸ್ತವವೇನೆಂದರೆ ಪರಲೋಕದಲ್ಲಿ ದೃಢ ವಿಶ್ವಾಸವಿಡದವರೇ ಯಾತನೆಯಲ್ಲಿರುವರು ಹಾಗೂ ಇಂದು ವಿದೂರ ಪಥಭ್ರಷ್ಟತೆಯಲ್ಲಿದ್ದಾರೆ.
(9) ಸ್ವತಃ ಇವನೇ ಅಲ್ಲಾಹನ ಮೇಲೆ ಸುಳ್ಳು ಸೃಷ್ಟಿಸಿರುವನೊ ಅಥವಾ ಇವನಿಗೇನಾದರೂ ಹುಚ್ಚು ಹಿಡಿದಿದೆಯೋ ಹಾಗಲ್ಲ ವಾಸ್ತವವೇನೆಂದರೆ ಪರಲೋಕದಲ್ಲಿ ದೃಢ ವಿಶ್ವಾಸವಿಡದವರೇ ಯಾತನೆಯಲ್ಲಿರುವರು ಹಾಗೂ ಇಂದು ವಿದೂರ ಪಥಭ್ರಷ್ಟತೆಯಲ್ಲಿದ್ದಾರೆ.
(10) ಮತ್ತು ನಾವು ದಾವೂದರಿಗೆ ನಮ್ಮ ವತಿಯಿಂದ ಅನುಗ್ರಹವನ್ನು ಕರುಣಿಸಿದೆವು: (ನಾವು ಆದೇಶಿಸಿದೆವು) ಓ ಪರ್ವತಗಳೇ, ಮತ್ತು ಪಕ್ಷಿಗಳೇ ನೀವು ಅವರೊಂದಿಗೆ ಸ್ತುತಿಕೀರ್ತನೆಯನ್ನು ಮಾಡಿರಿ. ಮತ್ತು ನಾವು ಅವರಿಗೋಸ್ಕರ ಕಬ್ಬಿಣವನ್ನು ಮೃದುಗೊಳಿಸಿದೆವು.
(11) ನೀವು ಸರಿಯಾದ ಅಳತೆಯುಳ್ಳ ಯುದ್ಧ ಕವಚಗಳನ್ನು ರಚಿಸಿರಿ. ಕೊಂಡಿಗಳಲ್ಲಿ ಸಮ ಪ್ರಮಾಣವನ್ನು ನಿಶ್ಚಯಿಸಿ. ಮತ್ತು ನೀವು ಸತ್ಕರ್ಮಗಳನ್ನು ಕೈಗೊಳ್ಳಿರಿ. ಖಂಡಿತವಾಗಿಯು ನಾನು ನಿಮ್ಮ ಕರ್ಮಗಳನ್ನು ವೀಕ್ಷಿಸುತ್ತಿದ್ದೇನೆ.
(12) ಮತ್ತು ನಾವು ಸುಲೈಮಾನರಿಗೋಸ್ಕರ ಗಾಳಿಯನ್ನು ನಿಯಂತ್ರಿಸಿಕೊಟ್ಟೆವು. ಅದರ ಪ್ರಾತಃಕಾಲದ ಪ್ರಯಾಣವು ಒಂದು ತಿಂಗಳದ್ದಾಗಿದೆ. ಮತ್ತು ಅದರ ರಾತ್ರಿಯ ಪ್ರಯಾಣವು ಒಂದು ತಿಂಗಳದ್ದಾಗಿದೆ. ಮತ್ತು ನಾವು ಅವರಿಗೆ ತಾಮ್ರದ ಲಾವಾರಸದ ಚಿಲುಮೆಯನ್ನು ಹರಿಸಿಕೊಟ್ಟೆವು. ಅವರ ಪ್ರಭುವಿನ ಆದೇಶದಿಂದ ಕೆಲವು (ಜಿನ್) ಯಕ್ಷಗಳು ಅವರ ಅಧೀನದಲ್ಲಿದ್ದುಕೊಂಡು ಅವರ ಕೈಕೆಳಗೆ ಕೆಲಸ ಮಾಡುತ್ತಿದ್ದವು ಮತ್ತು ಅವರ ಪೈಕಿ ನಮ್ಮ ಆದೇಶವನ್ನು ಉಲ್ಲಂಘಿಸುವವನಿಗೆ ನಾವು ಧಗಧಗಿಸುವ ನರಕಾಗ್ನಿಯ ಸವಿಯನ್ನುಣಿಸುವೆವು.
(13) (ಯಕ್ಷಗಳು) ಸುಲೈಮಾನರಿಗಾಗಿ ಉನ್ನತ ಸೌಧಗಳನ್ನು ಪ್ರತಿಮೆಗಳನ್ನು ಕೊಳದಂತಿರುವ ಹರಿವಾಣಗಳನ್ನು ಮತ್ತು ಗೂಟಗಳಲ್ಲಿ ನಿಶ್ಚಯಿಸಲಾದ ಅಡಿಗೆಯ ಸದೃಢ ಕೊಪ್ಪರಿಗೆಗಳನ್ನು ಹೀಗೆ ಅವರು ಇಚ್ಛಿಸಿದೆಲ್ಲವನ್ನು ಅವರು ಸಿದ್ಧಪಡಿಸಿಕೊಡುತ್ತಿದ್ದರು. ಓ ದಾವೂದರ ಸಂತತಿಗಳೇ, ನೀವು ಇದಕ್ಕೆ ಕೃತಜ್ಞತಾಪೂರ್ವಕವಾಗಿ ಸತ್ಕರ್ಮಗಳನ್ನು ಕೈಗೊಳ್ಳಿರಿ. ನನ್ನ ದಾಸರ ಪೈಕಿ ಕೃತಜ್ಞರಾಗಿರುವ ದಾಸರು ಅತ್ಯಲ್ಪವೇ ಆಗಿರುತ್ತಾರೆ.
(14) ಹಾಗೆಯೇ ನಾವು ಸುಲೈಮಾನರ ಮೇಲೆ ಮರಣವನ್ನು ವಿಧಿಸಿದಾಗ ಯಕ್ಷ(ಜಿನ್)ಗಳಿಗೆ ಅವರ ಮರಣದ ಸುದ್ದಿಯನ್ನು ತಿಳಿಸಿಕೊಟ್ಟಿದ್ದು ಅವರ ಊರುಗೋಲನ್ನು ತಿನ್ನುತ್ತಿದ್ದಂತಹ ಗೆದ್ದಲು ಹುಳುಗಳ ಹೊರತು ಬೇರೇನೂ ಅಲ್ಲ. ಕೊನೆಗೆ ಸುಲೈಮಾನರು ನೆಲಕ್ಕುರುಳಿದಾಗ ಜಿನ್ನ್ಗಳಿಗೆ ನಾವು ಅಗೋಚರ ಜ್ಞಾನಿಗಳಾಗಿರುತ್ತಿದ್ದರೆ ಇಂತಹ ಅಪಮಾನಕರ ಶಿಕ್ಷೆಯಲ್ಲಿ ಒದ್ದಾಡುತ್ತಿರಲಿಲ್ಲವೆಂದು ಸ್ಪಷ್ಟವಾಗಿಬಿಟ್ಟಿತು.
(15) ವಾಸ್ತವದಲ್ಲಿ ಸಬಅದ ನಿವಾಸಿಗಳಿಗೆ ತಮ್ಮ ವಾಸ ಸ್ಥಳಗಳಲ್ಲಿ ಒಂದು ದೃಷ್ಟಾಂತವಿತ್ತು. ಅವರ ಬಲಭಾಗದಲ್ಲೂ, ಎಡಭಾಗದಲ್ಲೂ ಎರಡು ಉದ್ಯಾನಗಳಿದ್ದವು. ನೀವು ನಿಮ್ಮ ಪ್ರಭುವಿನ ಕಡೆಯ ಅನ್ನಾಧಾರವನ್ನು ಸೇವಿಸಿರಿ ಹಾಗೂ ಅವನಿಗೆ ಕೃತಜ್ಞತೆಯನ್ನರ್ಪಿಸಿರಿ. ಇದು ಉತ್ತಮವಾದ ನಾಡು ಮತ್ತು ಅವನು ಕ್ಷಮಾಶೀಲನಾದ ಪ್ರಭುವಾಗಿದ್ದಾನೆ!
(16) ಆದರೆ ಅವರು ವಿಮುಖರಾದಾಗ ನಾವು ಅವರ ಮೇಲೆ ರಭಸವಾದ ಪ್ರವಾಹವನ್ನು ಹರಿಸಿಬಿಟ್ಟೆವು ಹಾಗೂ ಅವರ ಎರಡು ತೋಟಗಳ ಬದಲಿಗೆ ಕಹಿಯಾದ ಫಲಗಳನ್ನು ಹೊಂದಿದ್ದ ಹಾಗೂ ಕೆಲವು ಬೋರೆಮರಗಳನ್ನು ಹೊಂದಿದ ಎರಡು ತೋಟಗಳನ್ನು ನೀಡಿದೆವು.
(17) ನಾವು ಅವರ ಕೃತಘ್ನತೆಯ ಪ್ರತಿಫಲವನ್ನು ಅವರಿಗೆ ನೀಡಿದೆವು. ನಾವು (ಇಂತಹ) ಕಠಿಣ ಶಿಕ್ಷೆಯನ್ನು ಕೃತಘ್ನರಿಗೇ ನೀಡುತ್ತೇವೆ.
(18) ಮತ್ತು ಅವರ (ಸಬಅದ) ಹಾಗೂ ನಾವು ಸಮೃದ್ಧಿಯನ್ನು ದಯಪಾಲಿಸಿರುವಂತಹ (ಸಿರಿಯಾದ) ನಾಡುಗಳ ನಡುವೆ ಪ್ರತ್ಯಕ್ಷವಿರುವಂತಹ ಕೆಲವು ಗ್ರಾಮಗಳನ್ನು ನಿರ್ಮಿಸಿ ಕೊಟ್ಟಿದ್ದೆವು ಮತ್ತು ಅವುಗಳಲ್ಲಿ ಸಂಚಾರ ನಿಲ್ದಾಣವನ್ನು ಸರಿಯಾದ ಪ್ರಮಾಣದಲ್ಲಿ ನಿಶ್ಚಯಿಸಿದ್ದೆವು. ನೀವು ಅವುಗಳಲ್ಲಿ ರಾತ್ರಿಹಗಲೆನ್ನದೆ ನಿರ್ಭಯರಾಗಿ ಸಂಚರಿಸಿರಿ.
(19) ಆದರೆ ಅವರು ಹೇಳಿದರು: ನಮ್ಮ ಪ್ರಭು, ನೀನೂ ನಮ್ಮ ಪ್ರಯಾಣಗಳ ನಡುವೆ ವಿದೂರತೆಯನ್ನು ಉಂಟುಮಾಡು, ಕೊನೆಗೆ ಅವರು ತಮ್ಮ ಮೇಲೆಯೇ ಅಕ್ರಮವೆಸಗಿದರು. ಅದರ ನಿಮಿತ್ತ ನಾವು ಅವರನ್ನು ದಂತ ಕಥೆಗಳನ್ನಾಗಿ ಮಾಡಿ ಅವರನ್ನು ನುಚ್ಚುನೂರು ಮಾಡಿಬಿಟ್ಟೆವು ನಿಸ್ಸಂಶಯವಾಗಿಯೂ ಇದರಲ್ಲಿ ಪ್ರತಿಯೊಬ್ಬ ಕೃತಜ್ಞ ಸಹನಾಶೀಲನಿಗೆ ಹಲವಾರು ನಿದರ್ಶನಗಳಿವೆ.
(20) ಮತ್ತು ಶೈತಾನನು ಅವರ ವಿಷಯದಲ್ಲಿ ತನ್ನ ಗುಮಾನಿಯನ್ನು ನಿಜವನ್ನಾಗಿ ಮಾಡಿದನು. ಸತ್ಯವಿಶ್ವಾಸಿಗಳ ಒಂದು ಸಮೂಹದ ಹೊರತು ಉಳಿದವರೆಲ್ಲರೂ ಅವನ ಹಿಂಬಾಲಕರಾಗಿ ಬಿಟ್ಟರು.
(21) ಅವರ ಮೇಲೆ ಶೈತಾನನಿಗೆ ಯಾವುದೇ ಆಧಿಕಾರವಿರಲಿಲ್ಲ. ಆದರೆ ನಾವು ಪರಲೋಕದಲ್ಲಿ ವಿಶ್ವಾಸವಿರಿಸುವ ಜನರನ್ನು ಮತ್ತು ಅದರಲ್ಲಿ ಸಂದೇಹದಲ್ಲಿರುವ ಜನರನ್ನು ತಿಳಿಯಲು ಇಚ್ಛಿಸಿದೆವು ಮತ್ತು ನಿಮ್ಮ ಪ್ರಭುವು ಸರ್ವ ಸಂಗತಿಗಳ ಮೇಲೆ ಮೇಲ್ವಿಚಾರಕನಾಗಿದ್ದಾನೆ.
(22) ಓ ಪೈಗಂಬರರೇ ಹೇಳಿರಿ: ನೀವು ಅಲ್ಲಾಹನನ್ನು ಬಿಟ್ಟು ನಿಮ್ಮ ಆರಾಧ್ಯರೆಂದು ಭಾವಿಸುತ್ತಿರುವವರನ್ನು ಕರೆದುಕೊಳ್ಳಿರಿ. ಆಕಾಶಗಳಲ್ಲಾಗಲೀ, ಭೂಮಿಯಲ್ಲಾಗಲೀ ಅಣುತೂಕದಷ್ಟು ವಸ್ತುವಿಗೂ ಅವರು ಒಡೆಯರಲ್ಲ. ಅಲ್ಲದೇ ಅವುಗಳೆರಡರಲ್ಲಿ ಅವರಿಗೆ ಯಾವ ಸಹಭಾಗಿತ್ವವೂ ಇಲ್ಲ. ಮಾತ್ರವಲ್ಲದೆ ಅವರ ಪೈಕಿ ಯಾರೂ ಅಲ್ಲಾಹನ ಸಹಾಯಕರಾಗಿಯೂ ಇಲ್ಲ.
(23) ಅವನು ಅನುಮತಿ ನೀಡಲಾದವರಿಗೆ ಹೊರತು ಇನ್ನಾರಿಗೂ ಅವನ ಸನ್ನಿಧಿಯಲ್ಲಿ ಶಿಫಾರಸ್ಸು ಯಾವುದೇ ಪ್ರಯೋಜನವನ್ನು ನೀಡದು. ಕೊನೆಗೆ ಅವರ ಹೃದಯಗಳಿಂದ ಭೀತಿ ದೂರವಾದಾಗ ಅವರು ಕೇಳುವರು: ನಿಮ್ಮ ಪ್ರಭುವು ಏನು ಹೇಳಿದ್ದಾನೆ? ಸತ್ಯವನ್ನು ಎಂದು ಅವರು ಉತ್ತರಿಸುವರು. ಮತ್ತು ಅವನು ಅತ್ಯುನ್ನತನೂ ಮಹಾನನೂ ಆಗಿರುತ್ತಾನೆ
(24) ಕೇಳಿರಿ: ನಿಮಗೆ ಆಕಾಶಗಳಿಂದ ಮತ್ತು ಭೂಮಿಯಿಂದ ಜೀವನಾಧಾರವನ್ನು ನೀಡುವವನಾರು? ಹೇಳಿರಿ: ಅಲ್ಲಾಹನು ಎಂದು ಖಂಡಿತವಾಗಿಯೂ ನಮ್ಮ ಮತ್ತು ನಿಮ್ಮ ಪೈಕಿ ಕೇವಲ ಒಬ್ಬನೇ ಸನ್ಮಾರ್ಗದಲ್ಲಿದ್ದಾನೆ ಅಥವಾ ಸುವ್ಯಕ್ತ ಪಥ ಭ್ರಷ್ಟತೆಯಲ್ಲಿದ್ದಾನೆ.
(25) ಹೇಳಿರಿ: ನಾವು ಮಾಡಿರುವಂತಹ ಅಪರಾಧದ ಕುರಿತು ನಿಮ್ಮೊಂದಿಗೆ ಕೇಳಲಾಗದು ಮತ್ತು ನಿಮ್ಮ ಕರ್ಮಗಳ ಕುರಿತು ನಮ್ಮೊಂದಿಗೆ ವಿಚಾರಿಸಲಾಗದು.
(26) ಹೇಳಿರಿ: ನಮ್ಮ ಪ್ರಭುವು ನಮ್ಮನ್ನು ಒಟ್ಟುಗೂಡಿಸುವನು ತರುವಾಯ ನಮ್ಮ ನಡುವೆ ಸತ್ಯದೊಂದಿಗೆ ತೀರ್ಪನ್ನು ಮಾಡುವನು. ಅವನು ತೀರ್ಪುಗಾರನು ಹಾಗೂ ಸರ್ವಜ್ಞನಾಗಿರುತ್ತಾನೆ.
(27) ಹೇಳಿರಿ: ನೀವು ಅವನೊಂದಿಗೆ ಕಲ್ಪಿಸಿರುವ ಸಹಭಾಗಿಗಳನ್ನು ನನಗೆ ತೋರಿಸಿಕೊಡಿರಿ. ಎಷ್ಟು ಮಾತ್ರಕ್ಕೂ ಅವನಿಗೆ ಸಹಭಾಗಿ ಇಲ್ಲ. ಆದರೆ ಅಲ್ಲಾಹನು ಪ್ರಚಂಡನೂ, ಸುಜ್ಞಾನಿಯೂ ಆಗಿದ್ದಾನೆ.
(28) (ಓ ಪೈಗಂಬರರೇ) ನಾವು ನಿಮ್ಮನ್ನು ಸಮಸ್ತ ಮಾನವಕುಲಕ್ಕೆ ಸುವಾರ್ತೆ ಕೊಡುವವರಾಗಿಯೂ, ಮುನ್ನೆಚ್ಚರಿಕೆ ಕೊಡುವವರಾಗಿಯೂ ಕಳುಹಿಸಿರುತ್ತೇವೆ. ಆದರೆ ಹೆಚ್ಚಿನ ಜನರು ಅರಿಯುವುದಿಲ್ಲ.
(29) ನೀವು ಸತ್ಯವಂತರಾಗಿದ್ದರೆ ಪುನರುತ್ಥಾನದ ವಾಗ್ದಾನವು ಪೂರ್ಣಗೊಳ್ಳುವುದು ಯಾವಾಗ? ಎಂದು ಅವರು ಕೇಳುತ್ತಾರೆ.
(30) ಉತ್ತರಿಸಿರಿ: ನಿಮಗೊಂದು ವಾಗ್ದಾನದ ದಿನವು ನಿಶ್ಚಿತವಿದೆ. ಆದ್ದರಿಂದ ನೀವು ಒಂದು ಗಳಿಗೆಯಷ್ಟೂ ಹಿಂದೆ ಮುಂದೆ ಆಗಲಾರಿರಿ.
(31) ನಾವೆಂದಿಗೂ ಈ ಕುರ್ಆನಿನಲ್ಲಾಗಲೀ, ಇದಕ್ಕಿಂತ ಮುಂಚಿನ ಗ್ರಂಥಗಳಲ್ಲಾಗಲೀ ವಿಶ್ವಾಸವಿಡಲಾರೆವು ಎಂದು ಸತ್ಯನಿಷೇಧಿಗಳು ಹೇಳಿದರು. ಈ ಅಕ್ರಮಿಗಳು ತಮ್ಮ ಪ್ರಭುವಿನ ಮುಂದೆ ನಿಂತು ಕೊಂಡು ಒಬ್ಬರು ಇನ್ನೊಬ್ಬರನ್ನು ಆಕ್ಷೇಪಿಸುತ್ತಾ ನಿಲ್ಲುವಾಗಿನ ಇವರ ಅವಸ್ಥೆಯನ್ನು ನೀವು ನೋಡುತ್ತಿದ್ದರೆ! ಆಗ ದುರ್ಬಲರು ಅಕ್ರಮಿ ಜನರೊಂದಿಗೆ ನೀವಿಲ್ಲದಿರುತ್ತಿದ್ದರೆ ನಾವು ಸತ್ಯವಿಶ್ವಾಸಿಗಳಾಗುತ್ತಿದ್ದೆವು ಎಂದು ಹೇಳುವರು.
(32) ಈ ಅಹಂಕಾರಿಗಳು ದುರ್ಬಲರಿಗೆ ಉತ್ತರಿಸುವರು: ನಾವು ನಿಮ್ಮ ಬಳಿಗೆ ಸನ್ಮಾರ್ಗ ಬಂದ ಬಳಿಕ ನಿಮ್ಮನ್ನು ಅದರಿಂದ ತಡೆದಿದ್ದೇವೆಯೇ ಇಲ್ಲ. ನೀವೇ ಅಪರಾಧಿಗಳಾಗಿದ್ದಿರಿ.
(33) ಈ ದುರ್ಬಲರು ಅಹಂಕಾರಿಗಳೊAದಿಗೆ ಹೇಳುವರು: ಇಲ್ಲ, ರಾತ್ರಿ ಹಗಲೆನ್ನದೆ ನಿಮ್ಮ ಕುತಂತ್ರಗಳಿAದ ನಾವು ಅಲ್ಲಾಹನಲ್ಲಿ ನಿಷೇಧ ತಾಳಲು, ಅಲ್ಲಾಹನಿಗೆ ಸರಿಸಮಾನರನ್ನು ನಿಶ್ಚಯಿಸಲು ನೀವು ಆದೇಶ ನೀಡುತ್ತಿದ್ದುದು ನಮ್ಮ ಅವಿಶ್ವಾಸಕ್ಕೆ ನಾಂದಿಯಾಯಿತು ಮತ್ತು ಯಾತನೆಯನ್ನು ಕಂಡ ಕೂಡಲೇ ತಮ್ಮ ಸಂಕಟವನ್ನು ಅಡಗಿಸಿರುವರು ಮತ್ತು ನಾವು ಸತ್ಯನಿಷೇಧಗಳ ಕೊರಳುಗಳಿಗೆ ಕಂಠಕಡಗಗಳನ್ನು ಹಾಕಿ ಬಿಡುವೆವು. ಅವರಿಗೆ ಅವರು ಮಾಡುತ್ತಿದ್ದ ಕರ್ಮಗಳ ಪ್ರತಿಫಲವನ್ನೇ ನೀಡಲಾಗುವುದು.
(34) ನಾವು ಯಾವುದೇ ನಾಡಿನಲ್ಲಿ ಒಬ್ಬ ಮುನ್ನೆಚ್ಚರಿಕೆಗಾರನನ್ನು ಕಳುಹಿಸಿದಾಗ, ಅಲ್ಲಿನ ಸುಖಲೋಲುಪರು ಅವರಿಗೆ “ನೀವು ಯಾವ ಸಂದೇಶದೊAದಿಗೆ ಕಳುಹಿಸಲಾಗಿರುವಿರೋ ನಾವು ಅದನ್ನು ನಿರಾಕರಿಸುತ್ತೇವೆಂದು ಹೇಳದೇ ಇರಲಿಲ್ಲ.”
(35) ಮತ್ತು ಅವರು ಹೇಳಿದರು: ನಾವು ನಿಮಗಿಂತ ಹೆಚ್ಚು ಸಂಪತ್ತು ಮತ್ತು ಸಂತಾನಗಳನ್ನು ಹೊಂದಿದ್ದೇವೆ ಮತ್ತು ನಾವು ಯಾತನೆಗೊಳಪಡುವವರಲ್ಲ.
(36) ಓ ಪೈಗಂಬರರೇ, ನನ್ನ ಪ್ರಭುವು ತಾನಿಚ್ಛಿಸಿದವರಿಗೆ ಜೀವನಾಧಾರವನ್ನು ವಿಶಾಲಗೊಳಿಸುತ್ತಾನೆ ಮತ್ತು ತಾನಿಚ್ಛಿಸಿದವರಿಗೆ ಸಂಕುಚಿತಗೊಳಿಸುತ್ತಾನೆ. ಆದರೆ ಹೆಚ್ಚಿನ ಜನರು ಅರಿಯುವುದಿಲ್ಲ.
(37) ನಿಮ್ಮ ಸಂಪತ್ತಾಗಲೀ, ಸಂತಾನಗಳಾಗಲೀ ನಿಮಗೆ ನಮ್ಮ ಬಳಿ ಸಾಮಿಪ್ಯ ದೊರಕಿಸಿ ಕೊಡಲಾರವು. ಆದರೆ ಯಾರು ಸತ್ಯವಿಶ್ವಾಸವಿರಿಸಿ ಸತ್ಕರ್ಮವನ್ನು ಕೈಗೊಳ್ಳುತ್ತಾರೋ ಅವರಿಗೆ ಅವರ ಕರ್ಮಗಳ ಇಮ್ಮಡಿ ಪ್ರತಿಫಲವಿರುವುದು ಹಾಗೂ ಅವರು ನಿರ್ಭಯರಾಗಿ ಉನ್ನತ ಭವನಗಳಲ್ಲಿರುವರು.
(38) ಮತ್ತು ನಮ್ಮನ್ನು ಸೋಲಿಸಲಿಕ್ಕಾಗಿ ನಮ್ಮ ಸೂಕ್ತಿಗಳ ವಿರುದ್ಧ ಪ್ರಯತ್ನಿಸುವವರು ಯಾತನೆಯಲ್ಲಿ ಹಿಡಿಯಲ್ಪಟ್ಟು ಹಾಜರುಗೊಳಿಸಲಾಗುವರು.
(39) ಹೇಳಿರಿ: ಖಂಡಿತವಾಗಿಯು ನನ್ನ ಪ್ರಭುವು ತನ್ನ ದಾಸರ ಪೈಕಿ ತಾನಿಚ್ಛಿಸಿದವರಿಗೆ ಜೀವನಾಧಾರವನ್ನು ವಿಶಾಲಗೊಳಿಸುತ್ತಾನೆ ಹಾಗೂ ತಾನಿಚ್ಛಿಸಿದವರಿಗೆ ಸಂಕುಚಿತಗೊಳಿಸುತ್ತಾನೆ ಮತ್ತು ನೀವು ಅಲ್ಲಾಹನ ಮಾರ್ಗದಲ್ಲಿ ಏನೇ ಖರ್ಚು ಮಾಡಿದರೂ ಅಲ್ಲಾಹನು ಅದಕ್ಕೆ ಸಂಪೂರ್ಣ ಪ್ರತಿಫಲವನ್ನು ನೀಡುವನು. ಮತ್ತು ಅವನು ಎಲ್ಲರಿಗಿಂತ ಉತ್ತಮ ಜೀವನಾಧಾರ ನೀಡುವವನಾಗಿದ್ದಾನೆ.
(40) ಮತ್ತು ಅವನು ಸಕಲ ಮಾನವರನ್ನು ಒಟ್ಟುಗೂಡಿಸುವ ದಿನ ದೇವಚರರೊಂದಿಗೆ ಏನು; ಇವರು ನಿಮ್ಮನ್ನು ಆರಾಧಿಸುತ್ತಿದ್ದರೇ? ಎಂದು ಕೇಳುವನು.
(41) ಆಗ ಅವರು ಹೇಳುವರು: ನೀನು ಪರಮ ಪಾವನನು. ಇವರ ಹೊರತು ನೀನೇ ನಮ್ಮ ರಕ್ಷಕ ಮಿತ್ರನು ಆಗಿರುವೆ; ವಾಸ್ತವದಲ್ಲಿ ಇವರು ಯಕ್ಷ (ಜಿನ್)ಗಳನ್ನು ಆರಾಧಿಸುತ್ತಿದ್ದರು. ಇವರಲ್ಲಿ ಹೆಚ್ಚಿನವರು ಅವರ ಮೇಲೆಯೇ ವಿಶ್ವಾಸವಿಟ್ಟಿದ್ದರು.
(42) ಈ ದಿನ ನಿಮ್ಮಲ್ಲಿ ಯಾರೂ ಯಾರಿಗೂ ಯಾವುದೇ ಲಾಭ ಹಾಗೂ ನಷ್ಟದ ಸಾಮರ್ಥ್ಯ ಹೊಂದಿರುವುದಿಲ್ಲ ಮತ್ತು ಅಕ್ರಮವೆಸಗಿದವರಿಗೆ ನಾವು ಹೇಳುವೆವು: ನೀವು ಸುಳ್ಳಾಗಿಸುತ್ತಾ ಬಂದಿರುವAತಹ ಆ ನರಕಾಗ್ನಿಯ ಯಾತನೆಯನ್ನು ಸವಿಯಿರಿ.
(43) ಇವರ ಮುಂದೆ ನಮ್ಮ ಸುಸ್ಪಷ್ಟವಾದ ಸೂಕ್ತಿಗಳನ್ನು ಓದಿ ಹೇಳಲಾದಾಗ ಅವರು ಹೇಳುತ್ತಾರೆ: ಇವನು ನಿಮ್ಮ ಪೂರ್ವಿಕರ ಆರಾಧ್ಯರಿಂದ ನಿಮ್ಮನ್ನು ತಡೆಯಲೆಂದು ಬಯಸುವ ಒಬ್ಬ ವ್ಯಕ್ತಿಯಾಗಿದ್ದಾನೆ. ಮತ್ತು ಹೇಳುತ್ತಾರೆ: ಇದಂತು ಸ್ವಯಂ ಸೃಷ್ಟಿಸಲಾದ ಸುಳ್ಳಾಗಿದೆ ಹಾಗೂ ಅವರ ಬಳಿಗೆ ಸತ್ಯವು ಬಂದಾಗ, ಇದಂತು ಸುಸ್ಪಷ್ಟ ಜಾದುವಿನ ಹೊರತು ಬೇರೇನಲ್ಲ ಎಂದು ಸತ್ಯನಿಷೇಧಿಗಳು ಹೇಳುತ್ತಾರೆ.
(44) ವಸ್ತುತಃ ನಾವು ಅವರಿಗೆ ಅವರು ಅಧ್ಯಾಯನ ಮಾಡುವಂತಹ ಯಾವುದೇ ಗ್ರಂಥಗಳನ್ನು ಕೊಟ್ಟಿಲ್ಲ. ಮತ್ತು ನಿಮಗಿಂತ ಮುಂಚೆ ಇವರೆಡೆಗೆ ಯಾವೊಬ್ಬ ಮುನ್ನೆಚ್ಚರಿಕೆಗಾರÀನೂ ಕಳುಹಿಸಿರುವುದಿಲ್ಲ.
(45) ಮತ್ತು ಇವರಿಗಿಂತ ಮುಂಚೆ ಗತಿಸಿದವರೂ ಸಹ, ಸುಳ್ಳಾಗಿಸಿದ್ದರು ಮತ್ತು ನಾವು ಅವರಿಗೆ ದಯಪಾಲಿಸಿರುವ ಹತ್ತನೆಯ ಒಂದು ಭಾಗವನ್ನೂ ಸಹ ಇವರು ತಲುಪಲಿಲ್ಲ. ಆದರೂ ಅವರು ನನ್ನ ಸಂದೇಶವಾಹಕರನ್ನು ಸುಳ್ಳಾಗಿಸಿದರು. ಬಳಿಕ ನನ್ನ ಶಿಕ್ಷೆಯು ಹೇಗಿತ್ತು? ಎಂಬುದನ್ನು ನೋಡಿರಿ.
(46) ಹೇಳಿರಿ: ನಾನು ನಿಮಗೆ ಒಂದು ವಿಚಾರದ ಕುರಿತು ಉಪದೇಶ ನೀಡುತ್ತೇನೆ. ನೀವು ಅಲ್ಲಾಹನಿಗಾಗಿ ಇಬ್ಬಿಬ್ಬರಾಗಿ ಇಲ್ಲವೇ ಒಬ್ಬೊಬ್ಬರಾಗಿ ನಿಂತುಕೊAಡು ಚಿಂತಿಸಿ ನೋಡಿರಿ. ನಿಮ್ಮ ಒಡನಾಡಿಗೆ (ಮುಹಮ್ಮದ್ ರವರಿಗೆ) ಯಾವುದೇ ಭ್ರಾಂತಿ ಇಲ್ಲ. ಅವನಂತು ಒಂದು ಮಹಾ ಯಾತನೆಯ ಆಗಮನಕ್ಕೆ ಮುನ್ನ ನಿಮಗೆ ಮುನ್ನೆಚ್ಚರಿಕೆ ನೀಡುವವನಾಗಿದ್ದಾನೆ.
(47) ಹೇಳಿರಿ: ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಬೇಡಿದ್ದರೆ ಅದು ನಿಮಗೇ ಇರಲಿ. ನನ್ನ ಪ್ರತಿಫಲವು ಕೇವಲ ಅಲ್ಲಾಹನ ಹೊಣೆಯಲ್ಲಿದೆ ಅವನು ಸಕಲ ಸಂಗತಿಗಳ ಮೇಲೆ ಸಾಕ್ಷಿಯಾಗಿದ್ದಾನೆ.
(48) ಹೇಳಿರಿ: ನನ್ನ ಪ್ರಭುವು ಅಸತ್ಯವನ್ನು ಸತ್ಯದ ಮೂಲಕ ಸದೆಬಡಿಯುತ್ತಾನೆ. ಅವನು ಅಗೋಚರ ಸಂಗತಿಗಳನ್ನು ಬಲ್ಲವನಾಗಿದ್ದಾನೆ.
(49) ಹೇಳಿರಿ: ಸತ್ಯವು ಬಂದು ಬಿಟ್ಟಿತು. ಮಿಥ್ಯವು ಏನನ್ನೂ ಆರಂಭಿಸಲಾರದು ಮತ್ತು ಪುನರಾವರ್ತಿಸುವ ಶಕ್ತಿಯೂ ಅದಕ್ಕಿಲ್ಲ.
(50) ಹೇಳಿರಿ: ನಾನು ಪಥಭ್ರಷ್ಟನಾಗಿದ್ದರೆ ನನ್ನ ಪಥಭ್ರಷ್ಟತೆಯ ಪಾತಕ ನನ್ನ ಮೇಲೆಯೇ ಇರುವುದು ಮತ್ತು ನಾನು ಸನ್ಮಾರ್ಗದಲ್ಲಿದ್ದರೆ ಅದು ನನ್ನ ಪ್ರಭು ನನ್ನೆಡೆಗೆ ದಿವ್ಯ ಸಂದೇಶ ಮಾಡಿರುವುದರ ಕಾರಣವಾಗಿದೆ. ನಿಶ್ಚಯವಾಗಿಯು ಅವನು ಸರ್ವವನ್ನಾಲಿಸುವವನು, ಅತ್ಯಂತ ಸಮೀಪನೂ ಆಗಿದ್ದಾನೆ.
(51) ಮತ್ತು ಅವರು ಭಯಭೀತರಾಗಿ ಅಲೆದಾಡುವುದನ್ನು ನೀವು ಕಾಣುತ್ತಿದ್ದರೆ! ಆದರೆ ಅವರಿಗೆ ತಪ್ಪಿಸಿಕೊಳ್ಳುವ ಯಾವ ದಾರಿಯೂ ಇರುವುದಿಲ್ಲ ಮತ್ತು ಸಮೀಪದ ಸ್ಥಳದಿಂದಲೇ ಅವರು ಹಿಡಿಯಲ್ಪಡುವರು.
(52) ಅವರು ಹೇಳುವರು: ನಾವು ಈ ಕುರ್ಆನಿನಲ್ಲಿ ವಿಶ್ವಾಸವಿಟ್ಟೆವು. ಆದರೆ ಇಷ್ಟು ದೂರದಿಂದ (ಉದ್ದೇಶಿತ ವಸ್ತು) ಕೈಗೆಟುಕುವುದಾದರೂ ಹೇಗೆ?
(53) ಇದಕ್ಕೆ ಮೊದಲು ಅವರು ಅದನ್ನು ನಿರಾಕರಿಸಿದ್ದರು ಮತ್ತು ದೂರ ಸ್ಥಳದಿಂದಲೇ ಹಿಂದೆ ಮುಂದೆ ನೋಡದೇ ಅವರು ಊಹಾಸ್ತçವನ್ನು ಎಸೆಯುತ್ತಿದ್ದರು.
(54) ಅವರು ಮತ್ತು ಅವರು ಇಚ್ಛಿಸುತ್ತಿರುವ ವಿಶ್ವಾಸದ ನಡುವೆ ತಡೆ ಹಾಕಲಾಗುವುದು. ಇದಕ್ಕೆ ಮೊದಲು ಅವರಂತಿರುವ ಜನರೊಂದಿಗೆ ಮಾಡಲಾದಂತೆ. ನಿಶ್ಚಯವಾಗಿಯು ಅವರು ಗೊಂದಲ ಪೂರ್ಣ ಸಂದೇಹದಲ್ಲಿದ್ದರು.