45 - Al-Jaathiya ()

|

(1) ಹಾ - ಮೀಮ್

(2) ಈ ಗ್ರಂಥವು ಪ್ರತಾಪಶಾಲಿಯು ಸುಜ್ಞಾನಿಯು ಆದ ಅಲ್ಲಾಹನ ವತಿಯಿಂದ ಅವತೀರ್ಣವಾಗಿದೆ.

(3) ನಿಶ್ಚಯವಾಗಿಯು ಆಕಾಶಗಳಲ್ಲೂ, ಭೂಮಿಯಲ್ಲೂ ಸತ್ಯವಿಶ್ವಾಸಿಗಳಿಗೆ ಹಲವಾರು ನಿದರ್ಶನಗಳಿವೆ.

(4) ಸ್ವತಃ ನಿಮ್ಮ ಸೃಷ್ಟಿಯಲ್ಲೂ, ಅವನು ಹರಡಿಸಿದಂತಹ ಜಾನುವಾರುಗಳಲ್ಲೂ ವಿಶ್ವಾಸವುಳ್ಳ ಜನರಿಗೆ ಹಲವಾರು ನಿದರ್ಶನಗಳಿವೆ.

(5) ರಾತ್ರಿ ಹಗಲುಗಳ ಬದಲಾವಣೆಯಲ್ಲೂ, ಅಲ್ಲಾಹನು ಆಕಾಶದಿಂದ ಜೀವನಾಧಾರವನ್ನು ಇಳಿಸಿ ಅದರಿಂದ ಭೂಮಿಯನ್ನು ಅದರ ನಿರ್ಜೀವಾವಸ್ಥೆಯ ಬಳಿಕ ಸಜೀವಗೊಳಿಸುವುದರಲ್ಲೂ, ಮಾರುತಗಳ ಬದಲಾವಣೆಯಲ್ಲೂ ವಿವೇಕವುಳ್ಳ ಜನರಿಗೆ ಹಲವಾರು ನಿದರ್ಶನಗಳಿವೆ.

(6) ಇವು ಅಲ್ಲಾಹನ ಸೂಕ್ತಿಗಳಾಗಿವೆ. ಇವುಗಳನ್ನು ನಾವು ನಿಮಗೆ ಸತ್ಯದೊಂದಿಗೆ ಓದಿ ಹೇಳುತ್ತಿದ್ದೇವೆ. ಇನ್ನು ಅವರು ಅಲ್ಲಾಹನ ಹಾಗೂ ಅವನ ಸೂಕ್ತಿಗಳ ಬಳಿಕ ಇನ್ನಾವ ವೃತ್ತಾಂತದಲ್ಲಿ ವಿಶ್ವಾಸವಿಡುವರು?

(7) ಸುಳ್ಳುಗಾರನು, ಪಾಪಿಯು ಆದ ಪ್ರತಿಯೊಬ್ಬನಿಗೆ ವಿನಾಶವಿದೆ.

(8) ಅವನ ಮುಂದೆ ಅಲ್ಲಾಹನ ಸೂಕ್ತಿಗಳನ್ನು ಓದಿ ಹೇಳಲಾದರೆ ಅದನ್ನು ಕೇಳಿಸಿಕೊಂಡ ಬಳಿಕವೂ ದರ್ಪತೋರುತ್ತಾ ತಾನು ಅವುಗಳನ್ನು ಕೇಳಿಯೇ ಇಲ್ಲವೆಂಬAತೆ ಹಠ ಸಾಧಿಸಿ ನಿಲ್ಲುತ್ತಾನೆ. ಆದ್ದರಿಂದ ನೀವು ಅವನಿಗೆ ವೇದನಾಜನಕ ಯಾತನೆಯ ಶುಭ ವಾರ್ತೆಯನ್ನು ಕೊಡಿರಿ.

(9) ಅವನು ನಮ್ಮ ಸೂಕ್ತಿಗಳ ಪೈಕಿ ಯಾವುದಾದರು ವಿಷಯ ತಿಳಿದುಕೊಂಡರೆ ಅದನ್ನು ಗೇಲಿ ಮಾಡುತ್ತಾನೆ. ಅವರಿಗೆ ಅಪಮಾನಕರ ಯಾತನೆ ಇದೆ.

(10) ಅವರ ಮುಂದೆ ನರಕವಿದೆ. ಅವರು ಸಂಪಾದಿಸಿದ್ದಾಗಲಿ, ಅಲ್ಲಾಹನ ಹೊರತು ತಮ್ಮ ರಕ್ಷಕಮಿತ್ರರನ್ನಾಗಿ ಮಾಡಿಕೊಂಡವರಾಗಲಿ ಅವರಿಗೆ ಸ್ವಲ್ಪವೂ ಪ್ರಯೋಜನ ನೀಡಲಾರರು. ಅವರಿಗೆ ಮಹಾ ಯಾತನೆಯಿರುವುದು.

(11) . ಈ ಕುರ್‌ಆನ್ ಮಾರ್ಗದರ್ಶನವಾಗಿದೆ ಮತ್ತು ತಮ್ಮ ಪ್ರಭುವಿನ ಸೂಕ್ತಿಗಳನ್ನು ನಿರಾಕರಿಸುವವರಿಗೆ ವೇದನಾಜನಕ ಯಾತನೆಯಿದೆ.

(12) ನಿಮಗೆ ಸಮುದ್ರವನ್ನು ಅಧೀನಗೊಳಿಸಿಕೊಟ್ಟವನು. ಅಲ್ಲಾಹನಾಗಿರುವನು. ಅವನ ಆದೇಶದಿಂದ ಅದರಲ್ಲಿ ಹಡಗುಗಳು ಚಲಿಸಲೆಂದೂ, ನೀವು ಅವನ ಅನುಗ್ರಹವನ್ನು ಅರಸಲೆಂದೂ ಮತ್ತು ಕೃತಜ್ಞತೆ ಸಲ್ಲಿಸಲೆಂದಾಗಿದೆ.

(13) ಆಕಾಶ ಮತ್ತು ಭೂಮಿಯಲ್ಲಿರುವ ಪ್ರತಿಯೊಂದು ವಸ್ತುವನ್ನೂ ಅವನು ತನ್ನ ಕಡೆಯಿಂದ ನಿಮಗಾಗಿ ಅಧೀನಗೊಳಿಸಿ ಕೊಟ್ಟಿರುವನು. ಖಂಡಿತವಾಗಿಯು ಚಿಂತಿಸುವ ಜನರಿಗೆ ಇವುಗಳಲ್ಲಿ ಹಲವಾರು ನಿದರ್ಶನಗಳಿವೆ.

(14) ಓ ಪ್ರವಾದಿಯವರೇ ನೀವು ಸತ್ಯವಿಶ್ವಾಸಿಗಳಿಗೆ ಹೇಳಿರಿ: ಅಲ್ಲಾಹನ ಯಾತನೆಯ ದಿನಗಳ ನಿರೀಕ್ಷೆಯಿಲ್ಲದವರನ್ನು ಅವರು ಕ್ಷಮಿಸಲಿ. ಇದು ಅವನು ಒಂದು ಜನಾಂಗಕ್ಕೆ ಅವರ ಕೃತ್ಯಗಳ ಪ್ರತಿಫಲ ನೀಡಲೆಂದಾಗಿದೆ.

(15) ಯಾರಾದರೂ ಸತ್ಕರ್ಮವನ್ನು ಮಾಡಿದರೆ ಅದು ತನ್ನದೇ ಹಿತಕ್ಕಾಗಿದೆ. ಮತ್ತು ಯಾರಾದರೂ ಕೆಡುಕು ಮಾಡಿದರೆ ಅದರ ವಿಪತ್ತು ಅವನ ಮೇಲಿರುತ್ತದೆ. ತರುವಾಯ ನೀವೆಲ್ಲರೂ ನಿಮ್ಮ ಪ್ರಭುವಿನ ಕಡೆಗೆ ಮರಳಿಸಲಾಗುವಿರಿ.

(16) ನಿಜವಾಗಿಯು ನಾವು ಇಸ್ರಾಯೀಲ್ ಸಂತತಿಗಳಿಗೆ ಗ್ರಂಥವನ್ನೂ, ಅಧಿಪತ್ಯವನ್ನೂ, ಪ್ರವಾದಿತ್ವವನ್ನೂ ದಯಪಾಲಿಸಿದೆವು ಮತ್ತು ಅವರಿಗೆ ಶುದ್ಧ ವಸ್ತುಗಳಿಂದ ಜೀವನಾಧಾರವನ್ನು ನೀಡಿದ್ದೆವು ಹಾಗೂ ಸರ್ವಲೋಕದವರ ಮೇಲೆ ಶ್ರೇಷ್ಠತೆಯನ್ನು ಕರುಣಿಸಿದೆವು.

(17) ನಾವು ಅವರಿಗೆ ಧರ್ಮದ ವಿಷಯದಲ್ಲಿ ಸುವ್ಯಕ್ತ ನಿದರ್ಶನಗಳನ್ನು ದಯಪಾಲಿಸಿದೆವು. ಆದರೆ ಅವರು ತಮ್ಮ ಬಳಿಗೆ ಜ್ಞಾನ ಬಂದ ಬಳಿಕವೂ ತಮ್ಮೊಳಗಿನ ವಿರೋಧದಿಂದಲೇ ಭಿನ್ನಾಭಿಪ್ರಾಯವನ್ನು ತೋರಿದರು. ಅವರು ಭಿನ್ನತೆ ತೋರುತ್ತಿರುವ ವಿಷಯಗಳಲ್ಲಿ ಪುನರುತ್ಥಾನ ದಿನದಂದು ಖಂಡಿತವಾಗಿಯು ನಿಮ್ಮ ಪ್ರಭು ಅವರ ನಡುವೆ ತೀರ್ಮಾನ ಮಾಡಲಿರುವನು.

(18) ತರುವಾಯ ಓ ಪೈಗಂಬರರೇ ನಾವು ನಿಮ್ಮನ್ನು ಧರ್ಮದ ಸ್ಪಷ್ಟ ಮಾರ್ಗದಲ್ಲಿ ಇರಿಸಿದೆವು. ಆದುದರಿಂದ ನೀವು ಅದನ್ನು ಅನುಸರಿಸಿರಿ. ಮತ್ತು ಅರಿವಿಲ್ಲದವರ ಸ್ವೇಚ್ಛೆಗಳನ್ನು ಅನುಸರಿಸಬೇಡಿರಿ.

(19) ಖಂಡಿತವಾಗಿಯು ಅಲ್ಲಾಹನ ವಿರುದ್ಧ ಅವರು ನಿಮಗೆ ಒಂದಿಷ್ಟೂ ಪ್ರಯೋಜನ ಕಾರಿಯಾಗಲಾರರು. ಅಕ್ರಮಿಗಳು ಪರಸ್ಪರ ಆಪ್ತಮಿತ್ರರಾಗಿದ್ದಾರೆ ಮತ್ತು ಭಯಭಕ್ತಿಯುಳ್ಳವರ ರಕ್ಷಕ ಮಿತ್ರನು ಅಲ್ಲಾಹನಾಗಿದ್ದಾನೆ.

(20) ಈ ಕುರ್‌ಆನ್ ಸಕಲ ಮಾನವರಿಗೆ ಅಂತರ್‌ದೃಷ್ಟಿ ನೀಡುವಂತಹದ್ದಾಗಿದೆ. ಮತ್ತು ದೃಢವಿಶ್ವಾಸವಿರಿಸುವ ಜನರಿಗೆ ಮಾರ್ಗದರ್ಶನವೂ, ಕಾರುಣ್ಯವೂ ಆಗಿದೆ.

(21) ದುಷ್ಕೃತ್ಯಗಳನ್ನು ಎಸಗಿದವರು ನಾವು ಅವರನ್ನು ಸತ್ಯವಿಶ್ವಾಸವಿರಿಸಿ. ಸತ್ಕರ್ಮಗಳನ್ನು ಕೈಗೊಂಡವರ ಹಾಗೆಯೇ ಮಾಡಿಬಿಡುತ್ತೇವೆಂದು ಭಾವಿಸಿಕೊಂಡಿದ್ದಾರೆಯೇ? ಅವರಿಬ್ಬರ ಜೀವನ-ಮರಣವು ಸಮಾನವಾಗಲೆಂದು ಅವರು ಕೈಗೊಳ್ಳುತ್ತಿರುವ ಈ ತೀರ್ಪು ಅದೆಷ್ಟು ಕೆಟ್ಟದು!

(22) ಅಲ್ಲಾಹನು ಆಕಾಶಗಳನ್ನೂ, ಭೂಮಿಯನ್ನೂ ಉದ್ದೇಶಪೂರ್ವಕವಾಗಿ ಸೃಷ್ಟಿಸಿದ್ದಾನೆ ಇದು ಪ್ರತಿಯೊಬ್ಬ ವ್ಯಕ್ತಿಗೆ ಅವನು ಮಾಡಿರುವ ಕೃತ್ಯಗಳ ಸಂಪೂರ್ಣ ಪ್ರತಿಫಲವನ್ನು ನೀಡಲೆಂದಾಗಿದೆ ಹಾಗೂ ಅವರ ಮೇಲೆ ಅನ್ಯಾಯ ಮಾಡಲಾಗದು.

(23) ತನ್ನ ಸ್ವೇಚ್ಛೆಯನ್ನು ತನ್ನ ಆರಾಧ್ಯನನ್ನಾಗಿ ಮಾಡಿಕೊಂಡವನನ್ನೂ ನೀವು ಕಂಡಿರಾ? ಅವನು ಸತ್ಯವನ್ನು ಅರಿತುಕೊಂಡ ಬಳಿಕವೂ ಅಲ್ಲಾಹನು ಅವನನ್ನು ದಾರಿ ತಪ್ಪಿಸಿದನು ಅವನ ಕಿವಿ ಹಾಗೂ ಅವನ ಹೃದಯದ ಮೇಲೆ ಮುದ್ರೆಯೊತ್ತಿ ಬಿಟ್ಟನು ಮತ್ತು ಅವನ ದೃಷ್ಟಿಯ ಮೇಲೂ ತೆರೆಯನ್ನು ಎಳೆದು ಬಿಟ್ಟನು. ಇಂತಹ ವ್ಯಕ್ತಿಗೆ ಅಲ್ಲಾಹನ ನಂತರ ಸನ್ಮಾರ್ಗ ನೀಡುವವನು ಯಾರಿದ್ದಾನೆ? ಹಾಗಿದ್ದೂ ನೀವು ಉಪದೇಶ ಸ್ವೀಕರಿಸುವುದಿಲ್ಲವೇ?

(24) ಅವರು ಹೇಳುತ್ತಾರೆ: ನಮಗೆ ಇಹಲೋಕ ಜೀವನದ ಹೊರತು ಬೇರೆ ಜೀವನವಿಲ್ಲ. ನಾವು ಸಾಯುತ್ತೇವೆ. ಬದುಕುತ್ತೇವೆ ಮತ್ತು ನಮ್ಮನ್ನು ಕಾಲವೇ ನಾಶಗೊಳಿಸುತ್ತದೆ. ವಸ್ತುತಃ ಅವರಿಗೆ ಇದರ ಕುರಿತು ಯಾವ ಜ್ಞಾನವು ಇಲ್ಲ. ಅವರು ಕೇವಲ ಊಹಿಸುತ್ತಿದ್ದಾರೆ ಅಷ್ಟೇ.

(25) ಅವರ ಮುಂದೆ ನಮ್ಮ ಸುವ್ಯಕ್ತ ಸೂಕ್ತಿಗಳನ್ನು ಓದಿ ಹೇಳಲಾದಾಗ “ನೀವು ಸತ್ಯವಂತರಾಗಿದ್ದರೆ ನಮ್ಮ ಪೂರ್ವಜರನ್ನು ಎಬ್ಬಿಸಿ ತನ್ನಿರಿ ಎಂದು ಹೇಳುವುದರ ಹೊರತು ಅವರಿಗೆ ಇನ್ನಾವ ಆಧಾರವೂ ಇರಲಿಲ್ಲ.

(26) ಹೇಳಿರಿ: ಅಲ್ಲಾಹನೇ ನಿಮ್ಮನ್ನು ಜೀವಂತಗೊಳಿಸುತ್ತಾನೆ. ಆ ನಂತರ ನಿಮ್ಮನ್ನು ಮರಣಗೊಳಿಸುತ್ತಾನೆ. ಆ ಬಳಿಕ ಬರಲಿರುವ ಪುನರುತ್ಥಾನ ದಿನದಂದು ಅವನು ನಿಮ್ಮನ್ನು ಒಟ್ಟುಗೂಡಿಸುವನು. ಆದರೆ ಹೆಚ್ಚಿನ ಜನರು ತಿಳಿಯುವುದಿಲ್ಲ.

(27) ಆಕಾಶಗಳ ಮತ್ತು ಭೂಮಿಯ ಅಧಿಪತ್ಯವು ಅಲ್ಲಾಹನದ್ದಾಗಿದೆ. ಅಂತ್ಯಗಳಿಗೆಯು ಬರುವ ದಿನ ಮಿಥ್ಯವಾದಿಗಳು ನಷ್ಟಕ್ಕೊಳಗಾಗುವರು.

(28) ಆಗ ಪ್ರತಿಯೊಂದು ಸಮುದಾಯವನ್ನು ಮೊಣಕಾಲೂರಿರುವುದಾಗಿ ನೀವು ಕಾಣುವಿರಿ. ಪ್ರತಿಯೊಂದು ಸಮುದಾಯವೂ ತನ್ನ ಕರ್ಮ ಗ್ರಂಥದೆಡೆಗೆ ಕರೆಯಲ್ಪಡುವುದು. ಇಂದು ನಿಮಗೆ ನಿಮ್ಮ ಕೃತ್ಯಗಳ ಪ್ರತಿಫಲವನ್ನು ನೀಡಲಾಗುವುದು.

(29) ಇದು ನಮ್ಮ ಗ್ರಂಥವಾಗಿದೆ. ನಿಮ್ಮ ಕುರಿತು ಇದು ಸತ್ಯವನ್ನು ನುಡಿಯುತ್ತದೆ. ನಿಜವಾಗಿಯು ನೀವು ಮಾಡುತ್ತಿದ್ದುದನ್ನು ನಾವು ಬರೆಸಿ ದಾಖಲಿಸಿದ್ದೆವು

(30) ಆದ್ದರಿಂದ ಸತ್ಯವಿಶ್ವಾಸವಿರಿಸಿ, ಸತ್ಕರ್ಮಗಳನ್ನು ಕೈಗೊಂಡಿರುವವರನ್ನು ಅವರ ಪ್ರಭುವು ತನ್ನ ಕೃಪೆಯೊಳಗೆ ಪ್ರವೇಶಗೊಳಿಸುವನು. ಇದುವೇ ಸುಸ್ಪಷ್ಟ ಯಶಸ್ಸಾಗಿದೆ.

(31) ಆದರೆ ಸತ್ಯನಿಷೇಧಿಗಳೊಡನೆ (ಹೇಳಲಾಗುವುದು) ನಿಮಗೆ ನನ್ನ ಸೂಕ್ತಿಗಳನ್ನು ಓದಿ ಹೇಳಲಾಗುತ್ತಿರಲಿಲ್ಲವೇ? ಹಾಗಿದ್ದೂ ನೀವು ದರ್ಪತೋರುತ್ತಿದ್ದಿರಿ ಮತ್ತು ನೀವು ಅಪರಾಧಿ ಜನಾಂಗವಾಗಿದ್ದಿರಿ.

(32) ಅಲ್ಲಾಹನ ವಾಗ್ದಾನವು ಖಂಡಿತ ಸತ್ಯವಾಗಿದೆ ಮತ್ತು ಅಂತ್ಯಗಳಿಗೆಯಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಲಾದಾಗ ಅಂತ್ಯಗಳಿಗೆಯೇನೆAಬುದು ನಮಗೆ ಗೊತ್ತಿಲ್ಲ. ಅದು ಬರೀ ಊಹೆ ಎಂದು ನಾವು ತಿಳಿಯುತ್ತೇವೆ. ಮತ್ತು ನಾವು ನಂಬುವವರಲ್ಲ ಎಂದು ನೀವು ಹೇಳುತ್ತಿದ್ದಿರಿ.

(33) ಮತ್ತು ಅವರಿಗೆ ತಮ್ಮ ಕರ್ಮಗಳ ದುಷ್ಪರಿಣಾಮಗಳು ವ್ಯಕ್ತವಾಗುವುವು ಮತ್ತು ಅವರು ಪರಿಹಾಸ್ಯ ಮಾಡುತ್ತಿದ್ದುದ್ದೇ ಅವರನ್ನು ಆವರಿಸಿ ಬಿಡುವುದು.

(34) ಮತ್ತು ಹೇಳಲಾಗುವುದು: ನೀವು ಈ ದಿನದ ಭೇಟಿಯನ್ನು ಮರೆತು ಬಿಟ್ಟಂತೆ ಇಂದು ನಾವು ನಿಮ್ಮನ್ನು ಮರೆತು ಬಿಡುವೆವು ಮತ್ತು ನರಕಾಗ್ನಿಯೇ ನಿಮ್ಮ ನೆಲೆಯಾಗಿದೆ ಹಾಗು ನಿಮಗೆ ಸಹಾಯಕರಾರೂ ಇಲ್ಲ.

(35) ಇದು ನೀವು ಅಲ್ಲಾಹನ ಸೂಕ್ತಿಗಳನ್ನು ಪರಿಹಾಸ್ಯ ಮಾಡುತ್ತಿದ್ದುದ್ದರಿಂದಲೂ, ಇಹಲೋಕ ಜೀವನವು ನಿಮ್ಮನ್ನು ವಂಚಿಸಿ ಬಿಟ್ಟಿದ್ದರಿಂದಲೂ ಆಗಿದೆ. ಆದ್ದರಿಂದ ಈ ದಿನ ಅವರನ್ನು ನರಕಾಗ್ನಿಯಿಂದ ಹೊರ ಹಾಕಲಾಗದು ಮತ್ತು ಅವರಿಗೆ ಅಲ್ಲಾಹನನ್ನು ಒಲಿಸಿಕೊಳ್ಳುವ ಅವಕಾಶವನ್ನು ನೀಡಲಾಗದು.

(36) ಆದ್ದರಿಂದ ಆಕಾಶಗಳ, ಭೂಮಿಯ ಹಾಗೂ ಸರ್ವಲೋಕಗಳ ಪ್ರಭು ಆದ ಅಲ್ಲಾಹನಿಗೇ ಸರ್ವಸ್ತುತಿಯು ಮೀಸಲು.

(37) ಆಕಾಶಗಳಲ್ಲೂ ಭೂಮಿಯಲ್ಲೂ ಹಿರಿಮೆ ಅವನದೇ ಆಗಿದೆ. ಮತ್ತು ಅವನು ಪ್ರತಾಪಶಾಲಿಯೂ, ಯುಕ್ತಿಪೂರ್ಣನೂ ಆಗಿದ್ದಾನೆ.