46 - Al-Ahqaf ()

|

(1) ಹಾ ಮೀಮ್

(2) ಈ ಗ್ರಂಥವು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆದ ಅಲ್ಲಾಹನ ಕಡೆಯಿಂದ ಅವತೀರ್ಣಗೊಂಡಿದೆ.

(3) ನಾವು ಆಕಾಶಗಳನ್ನು, ಭೂಮಿಯನ್ನೂ ಮತ್ತು ಅವುಗಳ ನಡುವೆಯಿರುವ ಸಕಲ ವಸ್ತುಗಳನ್ನು ಉದ್ದೇಶಪೂರ್ವಕವಾಗಿಯೇ ಒಂದು ನಿರ್ದಿಷ್ಟ ಅವಧಿಗಾಗಿ ಸೃಷ್ಟಿಸಿದ್ದೇವೆ, ಆದರೆ ಸತ್ಯನಿಷೇಧಿಗಳು ತಮಗೆ ಎಚ್ಚರಿಕೆ ನೀಡಲಾಗುತ್ತಿರುವುದರಿಂದ ವಿಮುಖರಾಗುತ್ತಾರೆ.

(4) ಓ ಪೈಗಂಬರರೇ ಹೇಳಿರಿ; ನೀವು ಅಲ್ಲಾಹನನ್ನು ಬಿಟ್ಟು ಕರೆದು ಬೇಡುತ್ತಿರುವವರ ಕುರಿತು ಯೋಚಿಸಿದ್ದೀರಾ. ಅವರು ಭೂಮಿಯಲ್ಲಿ ಏನನ್ನು ಸೃಷ್ಟಿಸಿದ್ದಾರೆ ? ಅಥವ ಅವರಿಗೆ ಆಕಾಶಗಳ ಸೃಷ್ಟಿಯಲ್ಲಿ ಯಾವ ಪಾಲುದಾರಿಕೆಯಿದೆ ಎಂಬುದನ್ನು ನನಗೆ ತೋರಿಸಿಕೊಡಿರಿ ? ನೀವು ಸತ್ಯವಂತರಾಗಿದ್ದರೆ ಇದಕ್ಕೆ ಮುಂಚಿನ ಯಾವುದಾದರೂ ಗ್ರಂಥವನ್ನು ಅಥವ ಜ್ಞಾನದ ಯಾವುದಾದರೂ ಪಳಿಯುಳಿಕೆಗಳು ನಿಮ್ಮ ಬಳಿಯಲ್ಲಿದ್ದರೆ ಅದನ್ನೇ ತನ್ನಿರಿ.

(5) ಅಲ್ಲಾಹನನ್ನು ಬಿಟ್ಟು ತನ್ನ ಪ್ರಾರ್ಥನೆಗೆ ಪ್ರಳಯದಿನದವರೆಗೂ ಓಗೊಡಲಾರದಂತಹವರನ್ನು ಕರೆದು ಬೇಡುವವನಿಗಿಂತ ಹೆಚ್ಚು ದಾರಿಗೆಟ್ಟವನು ಇನ್ನಾರಿದ್ದಾನೆ, ಮಾತ್ರವಲ್ಲ ಅವರಂತು ಇವರ ಮೊರೆಯ ಬಗ್ಗೆ ಏನೂ ಅರಿವಿಲ್ಲದವರಾಗಿದ್ದಾರೆ.

(6) ಜನರನ್ನು ಒಟ್ಟುಗೂಡಿಸಲಾಗುವಾಗ ಅವರು ಇವರ ಶತ್ರುಗಳಾಗಿಬಿಡುವರು ಮತ್ತು ಅವರು ಇವರ ಆರಾಧನೆಯನ್ನೇ ನಿರಾಕರಿಸಿಬಿಡುವರು.

(7) ಅವರಿಗೆ ನಮ್ಮ ಸುಸ್ಪಷ್ಟ ಸೂಕ್ತಿಗಳನ್ನು ಓದಿ ಹೇಳಲಾದಾಗ ತಮ್ಮ ಬಳಿಗೆ ಬಂದ ಸತ್ಯದ ಕುರಿತು ಸತ್ಯನಿಷೇಧಿಗಳು 'ಇದೊಂದು ಸುಸ್ಪಷ್ಟ ಮಾಟವಾಗಿದೆ' ಎಂದು ಹೇಳುತ್ತಾರೆ.

(8) ಅಥವಾ ಇದನ್ನು ಸ್ವತಃ ಪೈಗಂಬರ್‌ರವರೆ ರಚಿಸಿರುತ್ತಾರೆಂದು ಅವರು ಹೇಳುತ್ತಿದ್ದಾರೆಯೇ ? ಹೇಳಿರಿ; ಇದನ್ನು ನಾನೇ ರಚಿಸಿರುತ್ತಿದ್ದರೆ ನೀವು ನನ್ನನ್ನು ಅಲ್ಲಾಹನ ಶಿಕ್ಷೆಯಿಂದ ಸ್ವಲ್ಪವೂ ರಕ್ಷಿಸಲಾರಿರಿ. ಈ ಕುರ್‌ಆನಿನ ಕುರಿತು ಹೆಣೆಯುತ್ತಿರುವ ಮಾತುಗಳನ್ನು ಅಲ್ಲಾಹನು ಚೆನ್ನಾಗಿ ಬಲ್ಲನು. ನನ್ನ ಮತ್ತು ನಿಮ್ಮ ನಡುವೆ ಸಾಕ್ಷಿಯಾಗಿ ಅವನೇ (ಅಲ್ಲಾಹನೇ) ಸಾಕು ಮತ್ತು ಅವನು ಕ್ಷಮಾಶೀಲನೂ ಕರುಣಾನಿಧಿಯೂ ಆಗಿದ್ದಾನೆ.

(9) ಹೇಳಿರಿ ; ನಾನು ಸಂದೇಶವಾಹಕರಲ್ಲಿ ಹೊಸಬನಲ್ಲ ಮತ್ತು ನನ್ನೊಂದಿಗೆ ನಿಮ್ಮೊಂದಿಗೆ ಹೇಗೆ ವರ್ತಿಸಲಾಗುವುದೆಂಬುದನ್ನು ನಾನರಿಯೆನು, ನಾನಂತು ನನ್ನೆಡೆಗೆ ದಿವ್ಯವಾಣಿ ಮಾಡುಲಾಗುತ್ತಿರುವುದನ್ನೇ ಅನುಸರಿಸುತ್ತೇನೆ ಮತ್ತು ನಾನು ಸುಸ್ಪಷ್ಟ ಮುನ್ನೆಚ್ಚರಿಕೆ ನೀಡುವವನು ಮಾತ್ರವಾಗಿದ್ದೇನೆ.

(10) ಓ ಪೈಗಂಬರರೇ ಹೇಳಿರಿ; ಈ ಕುರ್‌ಆನ್ ಅಲ್ಲಾಹನ ಕಡೆಯಿಂದಾಗಿದ್ದು ನೀವು ಅದನ್ನು ನಿಷೇಧಿಸಿಬಿಟ್ಟರೆ (ನಿಮ್ಮ ಗತಿ ಏನಾದೀತು ?) ಇದರಂತಿರುವ ಒಂದು ಗ್ರಂಥದ ಬಗ್ಗೆ ಇಸ್ರಾಯೀಲರ ಒಬ್ಬ ಸಾಕ್ಷೀದಾರನು ಸಾಕ್ಷಿಯನ್ನು ನೀಡಿದ್ದಾನೆ, ಅವನು ವಿಶ್ವಾಸವಿಟ್ಟಿರುವನು, ಮತ್ತು ನೀವು ಧಿಕ್ಕಾರ ತೋರಿದ್ದೀರಿ, ನಿಸ್ಸಂಶಯವಾಗಿಯೂ ಅಲ್ಲಾಹನು ಅಕ್ರಮಿಗಳನ್ನು ಸನ್ಮಾರ್ಗದಲ್ಲಿ ಮುನ್ನೆಡೆಸುವುದಿಲ್ಲ.

(11) ಸತ್ಯನಿಷೇಧಿಗಳು ಸತ್ಯವಿಶ್ವಾಸಿಗಳಿಗೆ ಹೇಳುತ್ತಾರೆ, ಇದು (ಈ ಕುರ್‌ಆನ್) ಉತ್ತಮ ವಾಗಿರುತ್ತಿದ್ದರೆ ಈ ಜನರು ನಮಗಿಂತ ಮುಂಚೆ ಅದರೆಡೆಗೆ ಮುಂದಾಗುತ್ತಿರಲಿಲ್ಲ. ಅವರು ಈ ಕುರ್‌ಆನಿನಿಂದ ಮಾರ್ಗದರ್ಶನ ಪಡೆಯದಿದ್ದುದರಿಂದ ಇದೊಂದು ಹಳೆಯ ಸುಳ್ಳಾಗಿದೆ ಎಂದು ಹೇಳುತ್ತಾರೆ.

(12) ಇದಕ್ಕೆ ಮೊದಲು ಮೂಸಾರ ಗ್ರಂಥವು ಮಾರ್ಗದರ್ಶಕವಾಗಿಯೂ, ಕಾರುಣ್ಯವಾಗಿಯೂ ಬಂದಿತ್ತು ಮತ್ತು ಈ ಕುರ್‌ಆನ್ ಅದನ್ನು ದೃಢೀಕರಿಸುವಂತದ್ದೂ, ಅರಬೀ ಭಾಷೆಯಲ್ಲಿರುವಂತದ್ದೂ ಆಗಿದೆ, ಅಕ್ರಮಿಗಳಿಗೆ ಎಚ್ಚರಿಸಲೆಂದು ಮತ್ತು ಸತ್ಕರ್ಮಿಗಳಿಗೆ ಸುವಾರ್ತೆಯಾಗಲೆಂದಾಗಿದೆ.

(13) ನಿಸ್ಸಂದೇಹವಾಗಿಯೂ ನಮ್ಮ ಪ್ರಭುವು ಅಲ್ಲಾಹನೆಂದು ಹೇಳಿ, ಆ ಬಳಿಕ ಅದರಲ್ಲಿ ದೃಢವಾಗಿ ನೆಲೆನಿಂತಿರುವವರ ಮೇಲೆ ಯಾವ ಭಯವೂ ಇಲ್ಲ ಮತ್ತು ಅವರು ದುಖಿಃತರಾಗಲಾರರು.

(14) ಇಂತಹವರೇ ಸ್ವರ್ಗವಾಸಿಗಳು, ಅವರು ಮಾಡುತ್ತಿದ್ದ ಸತ್ಕರ್ಮಗಳ ಪ್ರತಿಫಲವಾಗಿ ಅದರಲ್ಲೇ ಶಾಶ್ವತರಾಗಿರುವರು.

(15) ತನ್ನ ಮಾತಾಪಿತರೊಡನೆ ಸೌಜನ್ಯದಿಂದ ವರ್ತಿಸಬೇಕೆಂದು ನಾವು ಮಾನವನಿಗೆ ಆದೇಶಿಸಿದೆವು. ಅವನ ತಾಯಿಯು ಅವನನ್ನು ಕಷ್ಟವನ್ನು ಸಹಿಸಿಕೊಂಡು ಗರ್ಭಧರಿಸಿದಳು ಮತ್ತು ಕಷ್ಟ ಸಹಿಸಿಕೊಂಡೇ ಅವನನ್ನು ಹೆತ್ತಳು. ಅವನ ಗರ್ಭಧಾರಣೆ ಮತ್ತು ಅವನ ಹಾಲು ಬಿಡಿಸುವ ಕಾಲಾವಧಿ ಕನಿಷ್ಠ ಮೂವತ್ತು ತಿಂಗಳುಗಳಾಗಿವೆ. ಕೊನೆಗೆ ಅವನು ಪ್ರಾಪ್ತವಯಸ್ಕನಾಗಿ ನಲ್ವತ್ತು ವರ್ಷಕ್ಕೆ ತಲುಪಿದಾಗ ನನ್ನ ಪ್ರಭು, ನೀನು ನನ್ನ ಮೇಲೂ ನನ್ನ ಮಾತಾಪಿತರ ಮೇಲೂ ಮಾಡಿದಂತಹ ನಿನ್ನ ಅನುಗ್ರಹಕ್ಕೆ ನಾನು ಕೃತಜ್ಞತೆಯನ್ನರ್ಪಿಸಲೂ, ನೀನು ಸಂತೃಪ್ತಿ ಪಡುವಂತಹ ಸತ್ಕರ್ಮಗಳನ್ನು ಕೈಗೊಳ್ಳಲು ನನಗೆ ಸ್ಪೂರ್ತಿಯನ್ನು ನೀಡು ಮತ್ತು ನೀನು ನನ್ನ ಸಂತತಿಗಳನ್ನು ಸಜ್ಜನರನ್ನಾಗಿ ಮಾಡು ಮತ್ತು ನಾನು ನಿನ್ನೆಡೆಗೆ ಪಶ್ಚಾತಾಪ ಹೊಂದಿ ಮರಳುತ್ತೇನೆ. ಖಂಡಿತವಾಗಿಯು ನಾನು ವಿಧೇಯರಲ್ಲಾಗಿರುವೆನೆಂದು ಪ್ರಾರ್ಥಿಸುತ್ತೇನೆ.

(16) ಇಂತಹವರ ಸತ್ಕರ್ಮಗಳನ್ನು ನಾವು ಸ್ವೀಕರಿಸುತ್ತೇವೆ, ಮತ್ತು ಅವರ ಪಾಪಗಳನ್ನು ಮನ್ನಿಸಿಬಿಡುತ್ತೇವೆ, ಅವರು ಸ್ವರ್ಗವಾಸಿಗಳಲ್ಲಾಗಿದ್ದಾರೆ, ಇದು ಅವರಿಗೆ ನೀಡಲಾಗುತ್ತಿದ್ದಂತಹ ಸತ್ಯ ವಾಗ್ದಾನಕ್ಕನುಗುಣವಾಗಿದೆ.

(17) ಓರ್ವ ತನ್ನ ಮಾತಾಪಿತರಿಗೆ ಹೇಳಿದನು, ಛೀಮಾರಿ ನಿಮಗೆ ! ನೀವು ನನ್ನನ್ನು ಮರಣಾನಂತರ ಪುನಃ ಹೊರತರುವಲ್ಲಾಗುವುದೆಂದು ಹೇಳಿ ಹೆದರಿಸುತ್ತಿರುವಿರಾ? ವಸ್ತುತಃ ನನಗಿಂತ ಮುಂಚೆ ಅನೇಕ ತಲೆಮಾರುಗಳು ಗತಿಸಿವೆ. ಆಗ ಅವನ ಮಾತಾಪಿತರು ಅಲ್ಲಾಹನಲ್ಲಿ ಮೊರೆಹೋಗಿ ನಿನಗೆ ನಾಶ ಕಾದಿದೆ, ನೀನು ವಿಶ್ವಾಸಿಯಾಗಿಬಿಡು ಎಂದು ಹೇಳುತ್ತಾರೆ. ನಿಸ್ಸಂಶಯವಾಗಿಯು ಅಲ್ಲಾಹನ ವಾಗ್ದಾನವು ಸತ್ಯವಾಗಿದೆ, ಆಗ ಅವನು , ಇದು ಪೂರ್ವಿಕರ ಕಟ್ಟುಕಥೆಗಳಾಗಿವೆ ಎಂದು ಹೇಳುತ್ತಾನೆ.

(18) ಇವರಿಗಿಂತ ಮುಂಚೆ ಗತಿಸಿದ ಜಿನ್ನ್ ಹಾಗು ಮನುಷ್ಯರ ಸಮುದಾಯಗಳ ಜೊತೆಗೆ ಇವರ ಮೇಲೂ ಅಲ್ಲಾಹನ ಶಿಕ್ಷೆಯ ವಾಗ್ದಾನವು ಸತ್ಯವಾಗಿ ಪರಿಣಮಿಸಿತು, ನಿಜವಾಗಿಯೂ ಇವರು ನಷ್ಟಹೊಂದಿದವರಾಗಿದ್ದರು.

(19) ಪ್ರತಿಯೊಬ್ಬರಿಗೂ ತಮ್ಮ ಕರ್ಮಗಳಿಗೆ ಅನುಗುಣವಾದ ಪದವಿಗಳಿವೆ ಮತ್ತು ಇದು ಅವರಿಗೆ ಅವರ ಕರ್ಮಗಳ ಸಂಪೂರ್ಣ ಪ್ರತಿಫಲವನ್ನು ನೀಡಲೆಂದಾಗಿದೆ ಮತ್ತು ಅವರ ಮೇಲೆ ಅನ್ಯಾಯ ಮಾಡಲಾಗದು.

(20) ಮತ್ತು ಸತ್ಯನಿಷೇಧಿಗಳನ್ನು ನರಕಾಗ್ನಿಯ ಮುಂದೆ ಹಾಜರುಪಡಿಸುವ ದಿನ (ಅವರಿಗೆ ಹೇಳಲಾಗುವುದು) ನೀವು ನಿಮ್ಮ ಉತ್ತಮ ವಸ್ತುಗಳನ್ನು ಲೌಕಿಕ ಜೀವನದಲ್ಲೇ ಮುಗಿಸಿ ಅವುಗಳಿಂದ ಸುಖ ಅನುಭವಿಸಿರುವಿರಿ. ಆದ್ದರಿಂದ ನೀವು ಭೂಮಿಯಲ್ಲಿ ಯಾವುದೇ ಹಕ್ಕಿಲ್ಲದೆ ಅಹಂಭಾವ ತೋರುತ್ತಿದ್ದುದರ ನಿಮಿತ್ತ ಮತ್ತು ಆಜ್ಞೋಲ್ಲಂಘನೆ ಮಾಡುತ್ತಿದ್ದುದರ ನಿಮಿತ್ತ, ನಿಮಗೆ ನಿಂದ್ಯತೆಯ ಯಾತನೆಯನ್ನು ಪ್ರತಿಫಲವಾಗಿ ನೀಡಲಾಗುವುದು.

(21) (ಓ ಪೈಗಂಬರರೇ) ನೀವು ಆದ್ ಜನಾಂಗದ ಸಹೋದರ(ಹೂದ್‌ರನ್ನು) ಸ್ಮರಿಸಿರಿ. ಅವರು 'ಅಹ್‌ಕಾಫ್'ನಲ್ಲಿದ್ದ ತಮ್ಮ ಜನಾಂಗವನ್ನು ಎಚ್ಚರಿಸಿದ ಸಂದರ್ಭ ನಿಶ್ಚಯವಾಗಿಯು ಅವರಿಗಿಂತ ಮುಂಚೆಯು, ಅವರ ನಂತರವೂ ಮುನ್ನೆಚ್ಚರಿಕೆಗಾ ರರು ಗತಿಸಿದ್ದಾರೆ. ಅವರು ಹೇಳಿದರು; “ನೀವು ಅಲ್ಲಾಹನನ್ನು ಬಿಟ್ಟು ಇತರರನ್ನು ಆರಾಧಿಸಬೇಡಿರಿ. ನಿಸ್ಸಂದೇಹವಾಗಿಯೂ ನಾನು ನಿಮ್ಮ ಮೇಲೆ ಒಂದು ಮಹಾ ದಿನದ ಯಾತನೆಯನ್ನು ಭಯಪಡುತ್ತೇನೆ.

(22) ಜನರು ಹೇಳಿದರು; ನಮ್ಮ ಆರಾಧ್ಯರಿಂದ ನಮ್ಮನ್ನು ಅಗಲಿಸಲು ನೀನು ನಮ್ಮ ಬಳಿ ಬಂದಿರುವೆಯಾ ? ನೀನು ಸತ್ಯವಂತನಾಗಿದ್ದರೆ ನೀನು ನಮಗೆ ಎಚ್ಚರಿಕೆ ನೀಡುತ್ತಿರುವ ಆ ಶಿಕ್ಷೆಯನ್ನು ನಮ್ಮ ಮೇಲೆ ತಂದುಬಿಡು.

(23) ಪೈಗಂಬರ್ ಹೂದ್ ಹೇಳಿದರು; ಅದರ ಜ್ಞಾನವು ಅಲ್ಲಾಹನ ಬಳಿ ಮಾತ್ರವಿದೆ. ನಾನು ನನಗೆ ಕೊಟ್ಟು ಕಳುಹಿಸಿರುವ ಸಂದೇಶವನ್ನೇ ನಿಮಗೆ ತಲುಪಿಸುತ್ತಿದ್ದೇನೆ. ಆದರೆ ನಾನು ನಿಮ್ಮನ್ನು ಅವಿವೇಕಿ ಜನಾಂಗವಾಗಿ ಕಾಣುತ್ತಿರುವೆನು.

(24) ಅನಂತರ ಅವರು ಶಿಕ್ಷೆಯನ್ನು ತಮ್ಮ ಕಣಿವೆಯೆಡೆಗೆ ಬರುತ್ತಿರುವಂತಹ ಒಂದು ಮೋಡವನ್ನಾಗಿ ಕಂಡಾಗ ಹೇಳಿದರು; ಈ ಮೋಡವು ನಮ್ಮ ಮೇಲೆ ಮಳೆಯನ್ನು ವರ್ಷಿಸಲಿದೆ. (ಇಲ್ಲ) ವಸ್ತುತಃ ಈ ಮೋಡವು ನೀವು ಆತುರಪಟ್ಟುಕೊಳ್ಳುತ್ತಿದ್ದಂತಹ ಶಿಕ್ಷೆ ಆಗಿದೆ. ಇದು ಬಿರುಗಾಳಿಯಾಗಿದ್ದು ಅದರಲ್ಲಿ ವೇದನಾಜನಕ ಯಾತನೆಯಿದೆ.

(25) ಆ ಗಾಳಿಯು ತನ್ನ ಪ್ರಭುವಿನ ಅಪ್ಪಣೆಯೊಂದಿಗೆ ಪ್ರತಿಯೊಂದು ವಸ್ತುವನ್ನೂ ನಾಶಮಾಡುವುದು, ಕೊನೆಗೆ ಅವರ ವಸತಿಗಳ ಹೊರತು ಬೇರೇನೂ ಕಾಣಿಸದಂತಹ ಅವರ ಸ್ಥಿತಿಯಾಯಿತು, ಇದೇ ಪ್ರಕಾರ ನಾವು ಅಪರಾಧಿ ಜನರಿಗೆ ಶಿಕ್ಷೆಯನ್ನು ನೀಡುತ್ತೇವೆ.

(26) ನಿಜವಾಗಿಯೂ ನಾವು ನಿಮಗೆ ನೀಡಿರÀದಂತಹ ಸಾಮರ್ಥ್ಯಗಳನ್ನು ನಾವು ಅವರಿಗೆ ನೀಡಿದ್ದೆವು ಮತ್ತುನಾವು ಅವರಿಗೆ ಕಿವಿಗಳನ್ನು, ಕಣ್ಣುಗಳನ್ನು ಮತ್ತು ಹೃದಯಗಳನ್ನು ನೀಡಿದ್ದೆವು. ಆದರೆ ಅವರ ಕಿವಿಗಳಾಗಲಿ, ಕಣ್ಣುಗಳಾಗಲಿ, ಅವರ ಹೃದಯಗಳಾಗಲಿ ಅವರಿಗೆ ಯಾವ ಪ್ರಯೋಜನವನ್ನೂ ನೀಡಲಿಲ್ಲ, ಏಕೆಂದರೆ ಅವರು ಅಲ್ಲಾಹನ ಸೂಕ್ತಿಗಳನ್ನು ನಿಷೇಧಿಸುತ್ತಿದ್ದರು ಮತ್ತು ಅವರು ಪರಿಹಾಸ್ಯ ಮಾಡುತ್ತಿದ್ದ ವಸ್ತುವೇ ಅವರನ್ನು ಆವರಿಸಿಬಿಟ್ಟಿತು.

(27) ನಿಶ್ಚಯವಾಗಿಯು ನಾವು ನಿಮ್ಮ ಸುತ್ತಮುತ್ತಲಿನ ನಾಡುಗಳನ್ನು ನಾಶಗೊಳಿಸಿರುತ್ತೇವೆ ಹಾಗು ಅವರು ಮರಳಲೆಂದು ನಾವು ವಿವಿಧ ಶೈಲಿಯಲ್ಲಿ ದೃಷ್ಟಾಂತಗಳನ್ನು ವಿವರಿಸಿಕೊಟ್ಟಿರುವೆವು.

(28) ಆದರೆ ಅವರು ಅಲ್ಲಾಹನನ್ನು ಬಿಟ್ಟು ದೇವಸಾಮಿಪ್ಯದ ಮಾಧ್ಯಮವನ್ನಾಗಿ ಮಾಡಿಕೊಂಡಿದ್ದ, ಆರಾಧ್ಯರು ಅವರ ಸಹಾಯಕ್ಕೆ ಏಕೆ ಬರಲಿಲ್ಲ ? ಮಾತ್ರವಲ್ಲ ಅವರು ಅವರಿಂದ ಕಣ್ಮರೆಯಾಗಿಬಿಟ್ಟಿದ್ದರು. ವಾಸ್ತವದಲ್ಲಿ ಇದು ಅವರ ಮಿಥ್ಯ ಕಲ್ಪನೆ ಮತ್ತು ಸುಳ್ಳಾರೋಪವಾಗಿತ್ತು.

(29) (ಓ ಪೈಗಂಬರರೇ)ಕುರ್‌ಆನನ್ನು ಆಲಿಸಲೆಂದು ನಾವು ಯಕ್ಷ(ಜಿನ್ನ್)ಗಳ ಸಮೂಹವೊಂದನ್ನು ನಿಮ್ಮೆಡೆಗೆ ತಿರುಗಿಸಿದ ಸಂದರ್ಭವನ್ನು ಸ್ಮರಿಸಿರಿ. ಹಾಗೆಯೇ ಅವರು ಪೈಗಂಬರರ ಬಳಿಗೆ ಬಂದಾಗ ಪರಸ್ಪರ ಮೌನವಾಗಿ ಆಲಿಸಿರಿ ಎಂದರು. ಅನಂತರ ಓದಿ ಮುಗಿದ ಬಳಿಕ ಮುನ್ನೆಚ್ಚರಿಕೆ ನೀಡುವವರಾಗಿ ತಮ್ಮ ಜನಾಂಗದೆಡೆಗೆ ಮರಳಿದರು.

(30) ಅವರು ಹೇಳಿದರು; ಓ ನಮ್ಮ ಜನಾಂಗವೇ, ನಿಜವಾಗಿಯೂ ನಾವು ಮೂಸಾರವರ ನಂತರ ಅವತೀರ್ಣಗೊಳಿಸಲಾದಂತಹ ಗ್ರಂಥವನ್ನು ಆಲಿಸಿರುವೆವು. ಅದು ತನ್ನ ಮುಂಚಿನ ಗ್ರಂಥಗಳನ್ನು ದೃಢೀಕರಿಸುತ್ತದೆ. ಅದು ಸತ್ಯಧರ್ಮದೆಡೆಗೆ ಮತ್ತು ಋಜುವಾದ ಮಾರ್ಗದೆಡೆಗೆ ಮುನ್ನಡೆಸುತ್ತದೆ.

(31) ಓ ನಮ್ಮ ಜನಾಂಗವೇ, ನೀವು ಅಲ್ಲಾಹನತ್ತ ಕರೆ ನೀಡುವವನ ಕರೆಗೆ ಓಗೊಡಿರಿ ಹಾಗು ಅವನಲ್ಲಿ ವಿಶ್ವಾಸವನ್ನಿಡಿರಿ. ಆಗ ಅಲ್ಲಾಹನು ನಿಮ್ಮ ಪಾಪಗಳನ್ನು ಕ್ಷಮಿಸುವನು ಮತ್ತು ನಿಮ್ಮನ್ನು ವೇದನಾಜನಕ ಯಾತನೆಯಿಂದ ರಕ್ಷಿಸುವನು.

(32) ಯಾರು ಅಲ್ಲಾಹನತ್ತ ಕರೆ ನೀಡುವವನ ಕರೆಗೆ ಓಗೊಡುವುದಿಲ್ಲವೋ ಅವನು ಭೂಮಿಯಲ್ಲಿ (ಅಲ್ಲಾಹನನ್ನು) ಸೋಲಿಸಲಾರನು. ಅವನಿಗೆ ಅಲ್ಲಾಹನ ಹೊರತು ಇನ್ನಾವ ರಕ್ಷಕ ಮಿತ್ರರಿಲ್ಲ. ಅವರು ಪ್ರತ್ಯಕ್ಷ ಮಾರ್ಗಭ್ರಷ್ಟತೆಯಲ್ಲಿರುವರು.

(33) ಆಕಾಶಗಳನ್ನು ಮತ್ತು ಭೂಮಿಯನ್ನು ಸೃಷ್ಟಿಸಿ, ಅವುಗಳ ಸೃಷ್ಟಿಯಿಂದ ದಣಿಯದ ಅಲ್ಲಾಹನು ನಿಜವಾಗಿಯು ಮೃತರನ್ನು ಜೀವಂತಗೊಳಿಸಲು ಶಕ್ತನೆಂದು ಅವರು ಕಾಣುವುದಿಲ್ಲವೇ ? ಯಾಕಿಲ್ಲ ! ಖಂತವಾಗಿಯು ಅವನು ಸಕಲ ವಸ್ತುಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.

(34) ಮತ್ತು ಸತ್ಯನಿಷೇಧಿಗಳನ್ನು ನರಕಾಗ್ನಿಯ ಮುಂದೆ ಹಾಜರುಗೊಳಿಸಲಾಗುವ ದಿನ (ಹೇಳಲಾಗುವುದು) ಇದು ನಿಜವಲ್ಲವೇ ? ಆಗ ಅವರು ಹೇಳುವರು; ಹೌದು, ನಮ್ಮ ಪ್ರಭುವಿನಾಣೆಗೂ ಅವನು (ಅಲ್ಲಾಹನು) ಹೇಳುವನು. ಇದೀಗ ನೀವು ನಿಮ್ಮ ನಿಷೇಧದ ಫಲವಾಗಿ ಯಾತನೆಯನ್ನು ಸವಿಯಿರಿ.

(35) ಓ ಪೈಗಂಬರರೇ ಮನೋದಾರ್ಢ್ಯ ಸಂದೇಶವಾಹಕರು ಸಹನೆ ವಹಿಸಿದಂತೆಯೇ ನೀವೂ ಸಹನೆವಹಿಸಿರಿ ಮತ್ತು ಅವರ ಯಾತನೆಗಾಗಿ ಆತುರಪಟ್ಟುಕೊಳ್ಳದಿರಿ. ಅವರು ಎಚ್ಚರಿಕೆ ನೀಡಲಾಗುತ್ತಿದ್ದುದನ್ನು ಕಣ್ಣೆದುರು ಕಾಣುವ ದಿನ ಒಂದು ತಾಸು ಮಾತ್ರ ನಾವು (ಇಹಲೋಕದಲ್ಲಿ) ತಂಗಿದ್ದೇವೆAದು ಅವರಿಗೆ ಭಾಸವಾಗುವುದು. ಈ ಸಂದೇಶವನ್ನು ತಲುಪಿಸುವುದು (ನಿಮ್ಮ ಕೆಲಸ), ಇನ್ನು ದುಷ್ಟರ ಹೊರತು ಇನ್ನಾರನ್ನೂ ನಾಶಕ್ಕೊಳಪಡಿಸಲಾಗದು.