59 - Al-Hashr ()

|

(1) ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಸಕಲ ವಸ್ತುಗಳೂ ಅಲ್ಲಾಹನ ಪಾವಿತ್ರö್ಯವನ್ನು ಸ್ತುತಿಸುತ್ತಿವೆ ಮತ್ತು ಅವನು ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿದ್ದಾನೆ.

(2) ಗ್ರಂಥದವರ ಪೈಕಿ ಸತ್ಯನಿಷೇಧಿಗಳನ್ನು ಪ್ರಥಮ ಗಡಿಪಾರಿನ ಸಂದರ್ಭದಲ್ಲಿ ಅವರ ಮನೆಗಳಿಂದ ಹೊರಹಾಕಿದವನು ಅವನೇ ಆಗಿದ್ದಾನೆ. ಅವರು ಹೊರಬರುವರೆಂದು ನೀವು ಊಹಿಸಿಯೇ ಇರಲಿಲ್ಲ ಮತ್ತು ಸ್ವತಃ ಅವರು ತಮ್ಮನ್ನು ತಮ್ಮ ಕೋಟೆಗಳು ಅಲ್ಲಾಹನಿಂದ ರಕ್ಷಿಸಿಕೊಳ್ಳಬಲ್ಲವೆಂದು ಭಾವಿಸಿಕೊಂಡಿದ್ದರು. ಆದರೆ ಅವರು ಊಹಿಸಿರದಂತಹ ಕಡೆಯಿಂದ ಅಲ್ಲಾಹನು ಅವರ ಕಡೆಗೆ ಬಂದನು ಹಾಗೂ ಅವರ ಹೃದಯಗಳಲ್ಲಿ ಭೀತಿಯನ್ನು ಹುಟ್ಟಿಸಿದನು.. ಅವರು ಸ್ವತಃ ತಮ್ಮ ಕೈಗಳಿಂದ ಹಾಗೂ ಸತ್ಯ ವಿಶ್ವಾಸಿಗಳ ಕೈಗಳಿಂದ ತಮ್ಮ ಮನೆಗಳನ್ನು ಕೆಡವಿ ನಾಶ ಮಾಡುತ್ತಿದ್ದರು. ಆದ್ದರಿಂದ ಓ ದೃಷ್ಟಿಯುಳ್ಳವರೇ ನೀವು ಪಾಠ ಕಲಿಯಿರಿ.

(3) ಅಲ್ಲಾಹನು ಅವರ ಮೇಲೆ ಗಡಿಪಾರನ್ನು ವಿಧಿಸದಿರುತ್ತಿದ್ದರೆ ಖಂಡಿತ ಅವನು ಅವರನ್ನು ಇಹಲೋಕದಲ್ಲೇ ಶಿಕ್ಷಿಸುತ್ತಿದ್ದನು ಮತ್ತು ಅವರಿಗೆ ಪರಲೋಕದಲ್ಲಿ ನರಕಯಾತನೆ ಇದೆ.

(4) ಇದೇಕೆಂದರೆ ಅವರು ಅಲ್ಲಾಹನನ್ನೂ. ಅವನ ಸಂದೇಶವಾಹಕರನ್ನೂ ವಿರೋಧಿಸಿದುದರ ನಿಮಿತ್ತವಾಗಿದೆ, ಮತ್ತು ಯಾರು ಅಲ್ಲಾಹನನ್ನು ವಿರೋಧಿಸುತ್ತಾನೋ ಖಂಡಿತವಾಗಿಯೂ ಅಲ್ಲಾಹನು ಅವರಿಗೆ ಅತ್ಯುಗ್ರ ಯಾತನೆಯನ್ನು ನೀಡುವವನಾಗಿದ್ದಾನೆ.

(5) ನೀವು ಖರ್ಜೂರ ಮರವನ್ನು ಕಡಿದಿದ್ದೂ ಅಥವ ಅವುಗಳನ್ನು ಅವುಗಳ ಕಾಂಡಗಳಲ್ಲಿ ಉಳಿಯಬಿಟ್ಟಿದ್ದೂ ಎಲ್ಲವೂ ಅಲ್ಲಾಹನ ಅಪ್ಪಣೆಯ ಮೇರೆಗೆ ಆಗಿತ್ತು ಹಾಗೂ ಇದು ಧಿಕ್ಕಾರಿಗಳನ್ನು ಅಲ್ಲಾಹನು ಅಪಮಾನಿಸಲೆಂದೂ ಆಗಿತ್ತು.

(6) ಅಲ್ಲಾಹನು ಯಹೂದರಿಂದ ಪಡೆದು ತನ್ನ ಸಂದೇಶವಾಹಕರ ವಶಕ್ಕೆ ಕೊಟ್ಟಿರುವ ಸಂಪತ್ತಿಗಾಗಿ, ನೀವು ಕುದುರೆಗಳನ್ನಾಗಲಿ, ಒಂಟೆಗಳನ್ನಾಗಲಿ ಓಡಿಸಲಿಲ್ಲ. ಆದರೆ ಅಲ್ಲಾಹನು ತನ್ನ ಸಂದೇಶವಾಹಕರನ್ನು ತಾನಿಚ್ಛಿಸಿದವರ ಮೇಲೆ ಅಧಿಕಾರವನ್ನು ಕೊಡುತ್ತಾನೆ. ಅಲ್ಲಾಹನು ಸಕಲ ವಿಷಯಗಳ ಮೇಲೆ ಸಾಮರ್ಥ್ಯ ಉಳ್ಳವನಾಗಿದ್ದಾನೆ.

(7) ಅಲ್ಲಾಹನು ತನ್ನ ಸಂದೇಶವಾಹಕರಿಗೆ ಗ್ರಾಮವಾಸಿಗಳಿಂದ ನೀಡಿರುವ ಸಂಪತ್ತು ಅಲ್ಲಾಹನಿಗೂ ಸಂದೇಶವಾಹಕರಿಗೂ, ಆಪ್ತ ಸಂಬAಧಿಕರಿಗೂ, ಅನಾಥರಿಗೂ, ನಿರ್ಗತಿಕರಿಗೂ ಮತ್ತು ಯಾತ್ರಿಕರಿಗೂ ಆಗಿದೆ. ಇದೇಕೆಂದರೆ ಸಂಪತ್ತು ನಿಮ್ಮಲ್ಲಿನ ಸಿರಿವಂತರ ಕೈಯಲ್ಲಿ ಮಾತ್ರ ಚಲಿಸುತ್ತಾ ಇರಬಾರದೆಂಬುದಾಗಿದೆ ಮತ್ತು ಸಂದೇಶವಾಹಕರು ನಿಮಗೆ ಏನನ್ನು ನೀಡುತ್ತಾರೋ ಅದನ್ನು ಸ್ವೀಕರಿಸಿರಿ ಮತ್ತು ಅವರು ಯಾವುದರಿಂದ ನಿಮ್ಮನ್ನು ತಡೆಯುತ್ತಾರೋ ಅದರಿಂದ ದೂರವಿರಿ ಮತ್ತು ಅಲ್ಲಾಹನನ್ನು ಭಯಪಡುತ್ತಿರಿ, ಖಂಡಿತವಾಗಿಯೂ ಅಲ್ಲಾಹನು ಕಠಿಣವಾಗಿ ಶಿಕ್ಷಿಸುವವನಾಗಿದ್ದಾನೆ.

(8) ಆ ಸೊತ್ತು ತಮ್ಮ ಮನೆಗಳಿಂದಲೂ, ತಮ್ಮ ಸೊತ್ತು ಸಂಪತ್ತುಗಳಿAದಲೂ ಹೊರ ಹಾಕಲಾದ ಬಡ ಮುಹಾಜಿರ್‌ಗಳಿಗಾಗಿದೆ. ಅವರು ಅಲ್ಲಾಹನ ಕಡೆಯ ಅನುಗ್ರಹ ಮತ್ತು ಸಂಪ್ರೀತಿಯನ್ನು ಬಯಸುತ್ತಾರೆ ಹಾಗೂ ಅಲ್ಲಾಹನ ಮತ್ತು ಅವನ ಸಂದೇಶವಾಹಕರ ಸಹಾಯ ಮಾಡುತ್ತಾರೆ, ಅವರೇ ಸತ್ಯವಂತರಾಗಿದ್ದಾರೆ.

(9) ಮತ್ತು ಆ ಸೊತ್ತು ಮುಹಾಜಿರ್‌ಗಳ ಆಗಮನಕ್ಕೆ ಮುಂಚೆ ಸತ್ಯವಿಶ್ವಾಸ ಸ್ವೀಕರಿಸಿ ಮದೀನಾದಲ್ಲಿ ವಾಸವಾಗಿದ್ದವರಿಗೂ ಇದೆ. ಅವರು ತಮ್ಮೆಡೆಗೆ ವಲಸೆ ಬಂದವರನ್ನು ಪ್ರೀತಿಸುತ್ತಾರೆ ಹಾಗೂ ಮುಹಾಜಿರ್‌ಗಳಿಗೆ ನೀಡಲಾದ ಧನದ ಕುರಿತು ಅವರು ತಮ್ಮ ಹೃದಯಗಳಲ್ಲಿ ಯಾವ ಪ್ರಯಾಸವನ್ನು ಕಾಣುವುದಿಲ್ಲ ಮತ್ತು ಸ್ವತಃ ತಮಗೆ ಅಗತ್ಯವಿದ್ದರೂ ತಮ್ಮ ಮೇಲೆ ಇತರರಿಗೆ ಆದ್ಯತೆ ನೀಡುತ್ತಾರೆ (ವಸ್ತುತಃ) ಯಾರು ತನ್ನಲ್ಲಿನ ಲೋಭತನದಿಂದ ರಕ್ಷಿಸಲ್ಪಡುತ್ತಾರೋ ಅವರೇ ವಿಜಯಿಗಳು.

(10) ಮತ್ತು ಆ ಸೊತ್ತು ಅವರ ನಂತರ ಬಂದವರಿಗೂ ಆಗಿದೆ, ಅವರು ಹೀಗೆ ಪ್ರಾರ್ಥಿಸುತ್ತಾರೆ, ಓ ನಮ್ಮ ಪ್ರಭುವೇ ನಮ್ಮನ್ನು ಮತ್ತು ನಮಗಿಂತ ಮೊದಲು ಸತ್ಯವಿಶ್ವಾಸ ಸ್ವೀಕರಿಸಿದ ಆ ನಮ್ಮ ಸಹೋದರರನ್ನು ಕ್ಷಮಿಸಿಬಿಡು ಹಾಗೂ ನಮ್ಮ ಹೃದಯಗಳಲ್ಲಿ ಸತ್ಯ ವಿಶ್ವಾಸಿಗಳ ಬಗ್ಗೆ ಯಾವುದೇ ಹಗೆತನವನ್ನು ಇರಿಸದಿರು, ಓ ನಮ್ಮ ಪ್ರಭುವೇ ನಿಸ್ಸಂಶಯವಾಗಿಯೂ ನೀನು ಕೃಪಾಳು, ಕರುಣಾನಿಧಿಯು ಆಗಿರುವೆ.

(11) (ಓ ಪೈಗಂಬರರೇ) ನೀವು ಕಪಟ ವಿಶ್ವಾಸಿಗಳನ್ನು ನೋಡಲಿಲ್ಲವೇ ? ಅವರು ಗ್ರಂಥದವರಾದ ತಮ್ಮ ಸತ್ಯನಿಷೇಧಿ ಸಹೋದರರಿಗೆ ಹೇಳುತ್ತಾರೆ; ನೀವು ಗಡಿಪಾರುಗೊಳಿಸಲ್ಪಟ್ಟರೆ ಖಂಡಿತ ನಾವು ಸಹ ನಿಮ್ಮೊಂದಿಗೆ ಹೊರಡುತ್ತೇವೆ ಹಾಗೂ ನಿಮ್ಮ ವಿಚಾರದಲ್ಲಿ ಎಂದಿಗೂ ಯಾರನ್ನು ಅನುಸರಿಸಲಾರೆವು ಇನ್ನು ನಿಮ್ಮೊಂದಿಗೆ ಯುದ್ಧ ಮಾಡಲಾದರೆ ಖಂಡಿತ ನಾವು ನಿಮಗೆ ಸಹಾಯಮಾಡುತ್ತೇವೆ, ಆದರೆ ಇವರು ನಿಜವಾಗಿಯೂ ಸುಳ್ಳುಗಾರರಾಗಿದ್ದಾರೆಂದು ಅಲ್ಲಾಹನು ಸಾಕ್ಷö್ಯವಹಿಸುತ್ತಾನೆ.

(12) ಅವರೇನಾದರೂ ಗಡಿಪಾರುಗೊಳಿಸಲ್ಪಟ್ಟರೆ ಇವರು ಅವರೊಂದಿಗೆ ಹೊರಡಲಾರರು ಮತ್ತು ಅವರೊಂದಿಗೆ ಯುದ್ಧ ಮಾಡಲಾರದೆ ಇವರು ಅವರಿಗೆ ಸಹಾಯವನ್ನೂ ಮಾಡಲಾರರು ಮತ್ತು ಇವರು ಅವರಿಗೆ ಸಹಾಯ ಮಾಡಲು ಮುಂದೆ ಬಂದರೂ ಖಂಡಿತ ಬೆನ್ನು ತಿರುಗಿಸಿ ಓಡುವರು ಬಳಿಕ ಅವರಿಗೆ ಯಾವ ಸಹಾಯವೂ ದೊರಕಲಾರದು.

(13) ( ಓ ಸತ್ಯ ವಿಶ್ವಾಸಿಗಳೇ) ಅವರ ಹೃದಯಗಳಲ್ಲಿ ಅಲ್ಲಾಹನ ಭಯಕ್ಕಿಂತಲೂ ನಿಮ್ಮ ಭಯವಿದೆ. ಇದೇಕೆಂದರೆ ಅವರು ಅವಿವೇಕಿಗಳಾಗಿದ್ದಾರೆ.

(14) ಕೋಟೆಗಳಿಂದ ಆವೃತವಾದ ಪ್ರದೇಶಗಳಿಂದ ಅಥವ ಗೋಡೆಗಳ ಮರೆಯಲ್ಲಿ ಅವಿತುಕೊಂಡು ಮಾತ್ರವಲ್ಲದೆ ಅವರು ಒಟ್ಟಾಗಿ ನಿಮ್ಮೊಂದಿಗೆ ಯುದ್ಧ ಮಾಡಲಾರರು. ಅವರ ಒಳಗೊಳಗಿನ ಜಗಳವು ಪ್ರಬಲವಾಗಿದೆ; ನೀವು ಅವರನ್ನು ಒಟ್ಟಾಗಿರುವರೆಂದು ಭಾವಿಸಿ ಕೊಂಡಿದ್ದೀರಾ. ಆದರೆ ಅವರ ಹೃದಯಗಳು ಪರಸ್ಪರ ಭಿನ್ನವಾಗಿವೆ, ಇದೇಕೆಂದರೆ ಅವರು ಬುದ್ಧಿ ಇಲ್ಲದ ಜನರಾಗಿದ್ದಾರೆ.

(15) ಇವರ ಸ್ಥಿತಿಯು ಇವರಿಗಿಂತ ಮೊದಲು ಹತ್ತಿರದಲ್ಲೇ ಗತಿಸಿದವರ ಸ್ಥಿತಿಯಂತಿದೆ. ಅವರು ತಮ್ಮ ಕೃತ್ಯಗಳ ದುಷ್ಪರಿಣಾಮವನ್ನು ಸವಿದಿದ್ದರು ಮತ್ತು ಅವರಿಗೆ ವೇದನಾಜನಕ ಯಾತನೆಯು ಸಿದ್ಧವಿದೆ.

(16) ಇವರ (ಕಪಟಿಗಳ) ಉದಾಹರಣೆಯು ಶೈತಾನನಂತಿದೆ ಅವನು ಮನುಷ್ಯನಿಗೆ ನೀನು ಸತ್ಯವನ್ನು ನಿಷೇಧಿಸು ಎಂದನು. ಅವನು ಸತ್ಯವನ್ನು ನಿಷೇಧಿಸಿದಾಗ ಹೇಳಿದನು; ನಾನಂತೂ ನಿನ್ನಿಂದ ಸಂಬAಧ ಮುಕ್ತನಾಗಿದ್ದೇನೆ. ನಾನು ಸಕಲ ಲೋಕಗಳ ಪ್ರಭುವಾದ ಅಲ್ಲಾಹನನ್ನು ಭಯಪಡುತ್ತೇನೆ.

(17) ಕೊನೆಗೆ ಅವರಿಬ್ಬರ ಗತಿ ಏನಾಯಿತೆಂದರೆ ಅವರಿಬ್ಬರು ನರಕಾಗ್ನಿಯಲ್ಲಿ ಶಾಶ್ವತವಾಗಿರುವರು ಮತ್ತು ಅಕ್ರಮಿಗಳ ಪ್ರತಿಫಲವೂ ಇದೇ ಆಗಿರುತ್ತದೆ.

(18) ಓ ಸತ್ಯವಿಶ್ವಾಸಿಗಳೇ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ಪ್ರತಿಯೊಬ್ಬ ವ್ಯಕ್ತಿಯು ತಾನು ನಾಳೆ ಪರಲೋಕಕ್ಕಾಗಿ ಏನನ್ನು ಕಳುಹಿಸಿರುತ್ತಾನೆಂಬುದನ್ನು ನೋಡಲಿ ನೀವು ಸದಾ ಅಲ್ಲಾಹನನ್ನು ಭಯಪಡಿರಿ ಖಂಡಿತವಾಗಿಯೂ ಅಲ್ಲಾಹನು ನಿಮ್ಮ ಸಕಲ ಕರ್ಮಗಳ ಕುರಿತು ಅರಿವುಳ್ಳವನಾಗಿದ್ದಾನೆ.

(19) ನೀವು ಅಲ್ಲಾಹನನ್ನು ಮರೆತು ಬಿಟ್ಟವರಂತೆ ಆಗಬಾರದು. ಅಲ್ಲಾಹನೂ ಅವರನ್ನು ಸ್ವತಃ ತಮ್ಮನ್ನೇ ಮರೆಯುವಂತೆ ಮಾಡಿಬಿಟ್ಟನು, ಅವರೇ ದುರಾಚಾರಿಗಳಾಗಿದ್ದಾರೆ,

(20) ನರಕವಾಸಿಗಳು, ಮತ್ತು ಸ್ವರ್ಗವಾಸಿಗಳು ಸಮಾನರಲ್ಲ. ಸ್ವರ್ಗವಾಸಿಗಳು ಯಶಸ್ಸು ಪಡೆದವರಾಗಿರುವರು.

(21) ನಾವು ಈ ಕುರ್‌ಆನನ್ನು ಪರ್ವತದ ಮೇಲೆ ಅವತೀರ್ಣಗೊಳಿಸಿರುತ್ತಿದ್ದರೆ ಅದು ಅಲ್ಲಾಹನ ಭಯದಿಂದ ಕುಸಿದು ನುಚ್ಚುನೂರಾಗುವುದನ್ನು ನೀವು ಕಾಣುತ್ತಿದ್ದೀರಿ ಜನರು ಚಿಂತಿಸಲೆAದು ನಾವು ಉಪಮೆಗಳನ್ನು ಅವರಿಗೆ ವಿವರಿಸಿಕೊಡುತ್ತೇವೆ.

(22) ಅವನೇ ಅಲ್ಲಾಹನು, ಅವನ ಹೊರತು ಬೇರಾವ ಆರಾಧ್ಯನಿಲ್ಲ, ಗೋಚರ ಅಗೋಚರಗಳ ಜ್ಞಾನಿಯವನು ಅವನು ಪರಮದಯಾ ಮಯನು ಕರುಣಾನಿಧಿಯೂ ಆಗಿರುವನು.

(23) ಅವನೇ ಅಲ್ಲಾಹನು, ಅವನ ಹೊರತು ಬೇರಾವ ಆರಾಧ್ಯನಿಲ್ಲ. ಅವನು ಅಧಿಪತಿಯೂ, ಪರಮಪಾವನನೂ, ಸಕಲ ನ್ಯೂನತೆಗಳಿಂದ ಮುಕ್ತನೂ, ಆಶ್ರಯದಾತನೂ, ಮೇಲ್ವಿಚಾರಕನೂ, ಪ್ರಬಲನೂ, ಸ್ವೇಚ್ಛಾಧಿಪತಿಯೂ, ಮಹಾನತೆಯುಳ್ಳವನೂ, ಅವರು ಸಹಭಾಗಿಗಳಾಗಿ ನಿಶ್ಚಯಿಸುವ ವಸ್ತುಗಳಿಂದ ಅವನು ಅದೆಷ್ಟೋ ಪರಿಶುದ್ಧನು.

(24) ಅವನೇ ಅಲ್ಲಾಹನು; ಸೃಷ್ಟಿಕರ್ತನೂ ಅಸ್ತಿತ್ವವನ್ನು ನೀಡುವವನೂ, ರೂಪ ನೀಡುವವನೂ, ಆಗಿರುವ. ಅವನಿಗೆ ಅತ್ಯುತ್ತಮ ನಾಮಗಳಿವೆ. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವ ಸಕಲ ವಸ್ತುಗಳು ಅವನ ಪಾವಿತ್ರ‍್ಯವನ್ನು ಸ್ತುತಿಸುತ್ತಿವೆ ಅವನು ಪ್ರಬಲನೂ ಸುಜ್ಞಾನಿಯೂ ಆಗಿರುವನು.